ಕಲಬುರಗಿ: ಜಿಲ್ಲೆಯ ಹಲಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ದೇವಾಸ್ಥಾನದ ಪೀಠಾಧಿಪತಿ ಕಟ್ಟಿಮನಿ ಹಿರೇಮಠದ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ, ರಥೋತ್ಸವದಲ್ಲಿ ಪಾಲ್ಗೊಂಡರು. ಸತತ ಐದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ಪ್ರತಿನಿತ್ಯ ಜೋಡು ಪಲ್ಲಕ್ಕಿ ಉತ್ಸವ, ಅಂಬಲಿ ಬಂಡಿ ಮೆರವಣಿಗೆ, ಚೌಡಮ್ಮನ ಗಂಗಾಸ್ಥಳ ಕಾರ್ಯಕ್ರಮ, ಸರಪಳಿ ಹರಿಯುವುದು, ಪುರವಂತರಿಂದ ಅಗ್ನಿ ಹಾಯುವುದು ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಕೊನೆಯ ದಿನವಾದ ಭಾನುವಾರ ಭವ್ಯ ರಥೋತ್ಸವ, ಭಕ್ತರ ಜಯಘೋಷದ ಸಂಭ್ರಮವಿತ್ತು.