ಕಲಬುರಗಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಅವರ ಡಿಎನ್ಎ ಹೇಳಿಕೆಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಡಿಎನ್ಎ ನೋಡಿ ನಾವು ಟಿಕೆಟ್ ಕೊಡಲ್ಲ ಎಂದಿದ್ದ ಸಂತೋಷ್ ಜಿ ಅವರು ಉಮೇಶ್ ಜಾಧವ್ ಪುತ್ರನಿಗೆ ಯಾವ ಹಿನ್ನೆಲೆಯಲ್ಲಿ ಟಿಕೆಟ್ ನೀಡಿದ್ದೀರಿ ಎಂಬ ಪ್ರಶ್ನೆ ಜೊತೆಗೆ ಕಲಬುರ್ಗಿ ಜಿಲ್ಲೆಯ ಬಿಜೆಪಿ ನಾಯಕರ ಕುಟುಂಬ ರಾಜಕಾರಣದ ಪಟ್ಟಿಯನ್ನು ಪ್ರಿಯಾಂಕ್ ಖರ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ಕಲಬುರಗಿ ದಕ್ಷಿಣ ಶಾಸಕ, ಸೇಡಂ ಶಾಸಕ, ಗುತ್ತೆದಾರ, ಬಾಬುರಾವ ಚಿಂಚನಸೂರ, ಆಳಂದ ಶಾಸಕ ಎಲ್ಲರೂ ಪುತ್ರ ವ್ಯಾಮೋಹದಿಂದಲೆ ಇದ್ದವರು. ಇದೀಗ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಪುತ್ರವ್ಯಾಮೋಹ ಆರಂಭಗೊಂಡಿದೆ ಎಂದು ಜರಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪುತ್ರ ವ್ಯಾಮೋಹದ ಬಗ್ಗೆ ಲೋಕಸಭಾ ಚುನಾವಣೆಯಲ್ಲಿ ಅಬ್ಬರಿಸಿದ್ದ ಬಿಜೆಪಿ ನಾಯಕರು ಖರ್ಗೆ ಪುತ್ರ ವ್ಯಾಮೋಹದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದಾಗಿ ಉಮೇಶ್ ಜಾಧವ್ ಹೇಳಿದ್ದರು. ಇದೀಗ ಉಮೇಶ್ ಜಾಧವ್ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿದ್ದಾರೆ. ಇದು ಪುತ್ರ ವ್ಯಾಮೋಹ ಅಲ್ವಾ ಎಂದು ತಿರುಗೇಟು ನೀಡಿದ್ದಾರೆ.