ಕಲಬುರಗಿ: ಆಧುನಿಕ ಯುಗದ ತಂತ್ರಜ್ಞಾನದ ಪ್ರಭಾವದಿಂದಾಗಿ ಯುವಜನಾಂಗವೆಲ್ಲ ಮೊಬೈಲ್ನಲ್ಲಿ ಮುಳುಗಿ ಸಾಂಪ್ರದಾಯಿಕ ಓದಿಗೆ ಗುಡ್ಬಾಯ್ ಹೇಳಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೇ ಲೈಬ್ರರಿಗಳು ಕಣ್ಮರೆಯಾಗುತ್ತಿರುವುದು ಇಂದಿನ ಯುವಜನಾಂಗದ ಓದಿನ ಅಧಃಪತನದ ಹಾದಿಯ ಬಿಂಬವಾಗಿ ಕಂಡುಬರುತ್ತದೆ. ಇಷ್ಟೇ ಅಲ್ಲದೇ ಓದಲು ಆಸಕ್ತಿಯಿರುವ ಮಕ್ಕಳಿಗೆ ಹಣಕಾಸಿನ ಸಮಸ್ಯೆ ಏರ್ಪಟ್ಟು, ಅವರ ಭವಿಷ್ಯದ ಕನಸು ಅರ್ಧಕ್ಕೆ ನಿಲ್ಲಬಹುದಾದ ಸಾಧ್ಯತೆಯೂ ಹೆಚ್ಚಿರುತ್ತದೆ. ಹೀಗಾಗಿ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ವಿನೂತನ ಪ್ರಯತ್ನವೊಂದನ್ನು ಆರಂಭಿಸಿದೆ.
ಸಂಚಾರಿ ಲೈಬ್ರರಿ ಸ್ಥಾಪಿಸುವ ಉದ್ದೇಶವೇನು?: ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನೂತನವಾಗಿ ಆವಿಷ್ಕರಿಸಿರುವ 'ಸಂಚಾರಿ ಲೈಬ್ರರಿ'ಯನ್ನು ಹಳೆಯ ಬಸ್ಗಳನ್ನು ರೂಪಾಂತರಿಸಿ ಮಾಡಲಾಗಿದೆ. ಬಹುಮುಖ್ಯವಾಗಿ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ತೊಂದರೆ ಸೇರಿ ಇನ್ನಿತರ ಆರ್ಥಿಕ ಹಿಂಜರಿತದಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಈ ಮೊಬೈಲ್ ಲೈಬ್ರರಿ ಆವಿಷ್ಕರಿಸಲಾಗಿದೆ.
ಯಾವ ಪುಸ್ತಕಗಳ ಸಂಗ್ರಹವಿದೆ ?: ಸಂಚಾರಿ ಲೈಬ್ರರಿಯಲ್ಲಿ ಮುಖ್ಯವಾಗಿ ಆರೋಗ್ಯ ಹಾಗೂ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಕೃತಿಗಳು, ಜೀವನ ಚರಿತ್ರೆಗಳು, ಸಾಮಾನ್ಯ ಜ್ಞಾನ ಪುಸ್ತಕಗಳು, ಇಂಗ್ಲೀಷ್ ಸಾಹಿತ್ಯ, ಸಂವಿಧಾನ ಪುಸ್ತಕ, ದಿನಪತ್ರಿಕೆಗಳು, ಕವನ ಸಂಕಲನಗಳು, ನಾಟಕ ಪುಸ್ತಕಗಳು, ಸಾಮಾನ್ಯ ಜ್ಞಾನ, ಮಕ್ಕಳ ಪುಸ್ತಕಗಳು, ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು, ಕಲೆ, ಸಾಹಿತ್ಯ, ನಾಟಕ, ಕಥೆ, ಕಾದಂಬರಿ ಹೀಗೆ ಹತ್ತಾರು ಬಗೆಯ ಸುಮಾರು 4 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹಗಳಿವೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂತಸ: ಈ ಮೊಬೈಲ್ ಗ್ರಂಥಾಲಯದಲ್ಲಿ ಮೂರು ಕಡೆ ಸಿಸಿ ಕ್ಯಾಮರಾ ಕಣ್ಗಾವಲಿದ್ದು, ಫ್ಯಾನ್ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಈ ಲೈಬ್ರರಿ ಸಾಕಷ್ಟು ಅನುಕೂಲಕರವಾಗಿದ್ದು, ಗ್ರಂಥಾಲಯವನ್ನೇ ಕಾಣದ ಬಡ ವಿದ್ಯಾರ್ಥಿಗಳು ಇದರಿಂದ ಸಂತಸಗೊಂಡಿದ್ದಾರೆ.
'ಹಳೆ ಬಸ್ಸನ್ನೇ ಬಳಸಿಕೊಂಡು 3 ಲಕ್ಷಕ್ಕೂ ಅಧಿಕ ಹಣ ವ್ಯಯ ಮಾಡಿ, ಈ ಸಂಚಾರಿ ಲೈಬ್ರರಿ ಆವಿಷ್ಕರಿಸಲಾಗಿದೆ. ಬಸ್ ಒಳಾಂಗಣದಲ್ಲಿ ಸಿಸಿ ಕ್ಯಾಮರಾ, ಪುಸ್ತಕಗಳು, ಫ್ಯಾನ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಜೊತೆಗೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿಗಳ ಭಾವಚಿತ್ರದ ಜೊತೆಗೆ ನಾಣ್ಣುಡಿಗಳನ್ನ ಬರೆಯಲಾಗಿದೆ. ಬಸ್ ಹೊರಭಾಗದಲ್ಲಿ ಕಲಿಕೆಯ ಮಹತ್ವ ಹಾಗೂ ಸಂಚಾರಿ ನಿಯಮಗಳ ಪಾಲನೆ ಕುರಿತಾದ ಮಾಹಿತಿಗಳನ್ನು ಬರೆಯಲಾಗಿದೆ. ನಿತ್ಯ ಗ್ರಾಮೀಣ ಭಾಗದ ಎರಡು ಶಾಲಾ- ಕಾಲೇಜುಗಳಿಗೆ ತೆರಳುವ ಈ ಸಂಚಾರಿ ಗ್ರಂಥಾಲಯ, ಬಡ ವಿದ್ಯಾರ್ಥಿಗಳಿಗೆ ಜ್ಞಾನ ಭಂಡಾರ ಪಸರಿಸುತ್ತಿದೆ' ಎಂದು ಎನ್.ಈ.ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ತಿಳಿಸಿದ್ದಾರೆ.
ಓದಿ: ರಮೇಶ್ ಜಾರಕಿಹೊಳಿಯದ್ದು ನಾಚಿಕೆಗೇಡಿನ ಕೆಲಸ: ಕೋಡಿಹಳ್ಳಿ ಚಂದ್ರಶೇಖರ್
ಎನ್.ಈ.ಕೆ.ಎಸ್.ಆರ್.ಟಿ.ಸಿ ಯ ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಮೊಬೈಲ್ ಲೈಬ್ರರಿ ಅನುಕೂಲವಾಗಿದೆ. ಇದೇ ರೀತಿಯ ಇನ್ನಷ್ಟು ಸಂಚಾರಿ ಗ್ರಂಥಾಲಯ ವ್ಯವಸ್ಥೆ ತಲೆಯೆತ್ತಲಿ ಎಂದು ವಿದ್ಯಾರ್ಥಿಗಳು ಬೇಡಿಕೆಯನ್ನಿಟ್ಟಿದ್ದಾರೆ.