ಕಲಬುರಗಿ: ಲೈಕ್ಸ್ಗಾಗಿ ಮುಳ್ಳುಹಂದಿಯನ್ನು ಬೇಟೆಯಾಡಿ ಟಿಕ್ಟಾಕ್ ಮಾಡಿದ್ದ ಭೂಪರನ್ನು ಅರಣ್ಯಾಧಿಕಾರಿಗಳು ಹಿಡಿದು ಕಂಬಿ ಹಿಂದೆ ತಳ್ಳಿದ್ದಾರೆ. ಉಳಿದ ನಾಲ್ವರ ಬಂಧನಕ್ಕೆ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.
ತಾಲೂಕಿನ ಬೋಳೆವಾಡ ಗ್ರಾಮದ ಅಂಬರೀಶ್ ನಾಯಕೋಡಿ ಮತ್ತು ನಾಗೇಶ್ ಬಂಧಿತರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಮುಳ್ಳು ಹಂದಿ ಬೇಟೆಯಾಡಿ ಚಿತ್ರಹಿಂಸೆ ನೀಡಿ ಕೊಂದಿದ್ದ ಆರೋಪಿಗಳು, ರಕ್ತ ನೋಡದೆ ನಾವು ನಿದ್ದೆ ಮಾಡಲ್ಲ ಎಂಬ ಹಾಡಿನೊಂದಿಗೆ ಪ್ರಚೋದನಾತ್ಮಕ ಟಿಕ್ಟಾಕ್ ಮಾಡಿ ಹರಿಬಿಟ್ಟಿದ್ದರು.
ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅರಣ್ಯ ಇಲಾಖೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸಿ ಕಂಬಿಹಿಂದೆ ತಳ್ಳಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ನಾಲ್ವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.