ಕಲಬುರಗಿ: ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ವ್ಯಕ್ತಿಯನ್ನು ಕೊಲೆಗೈದ ಪ್ರಕರಣ ಸಂಬಂಧ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.


ಅವರಾದ(ಬಿ) ಗ್ರಾಮದ ನಿವಾಸಿ ಬಸವರಾಜ ಗೌಡಪ್ಪಗೋಳ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ.
2015ರ ಜನವರಿ 22 ರಂದು ಅವರಾದ(ಬಿ) ಗ್ರಾಮದಲ್ಲಿ ಭೀಮಸಿಂಗ್ ತಿವಾರಿ ಎಂಬವರಿಗೆ ಕಬ್ಬಿಣದ ರಾಡ್ನಿಂದ ಮನಬಂದಂತೆ ತಿವಿದ ಆರೋಪಿ, ಹತ್ಯೆಗೈದು ಶವವನ್ನು ನಾಲೆಯಲ್ಲಿ ಎಸೆದಿದ್ದ. ಅಪರಾಧಿ ಬಸವರಾಜ ಗೌಡಪ್ಪಗೋಳ ಕೊಲೆಯಾದ ಭೀಮಸಿಂಗ್ ತಿವಾರಿ ಬಸವರಾಜ ಅವರ ತಂಗಿಗೆ ಚುಡಾಯಿಸುತ್ತಿದ್ದನಂತೆ. ವಿಚಾರ ತಿಳಿದ ಬಸವರಾಜ ಪ್ಲಾನ್ ಮಾಡಿ ಭೀಮಸಿಂಗನಿಗೆ ಮದ್ಯ ಕುಡಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿರುವ ವಿಚಾರ ತನಿಖೆ ವೇಳೆ ತಿಳಿದು ಬಂದಿತ್ತು.
ಈ ಕುರಿತು ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ತನಿಖೆ ನಡೆಸಿದ ಗ್ರಾಮಿಣ ಪೋಲಿಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶ ಶುಕಲಾಕ್ಷ ಪಾಲನ್, ಬಸವರಾಜ ಗೌಡಪ್ಪಗೋಳಗೆ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.