ಕಲಬುರಗಿ: ಪದೋನ್ನತಿ ಹಾಗೂ ನೂತನ ನೇಮಕಾತಿ ಹೆಸರಲ್ಲಿ ಕಾರ್ಮಿಕರನ್ನು ತೆಗೆಯುವ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ ಹಾಗೂ ಸಿಐಟಿಯು ನೇತೃತ್ವದಲ್ಲಿ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಲಂ 371(ಜೆ) ಅಡಿ ವ್ಯಾಪ್ತಿಗೆ ಒಳಪಡುವ ಹುದ್ದೆಗಳಿಗೆ ಪದೋನ್ನತಿ ನೀಡಲಾಗುತ್ತಿದೆ. ಆದರೆ ಕೆಲವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಪದೋನ್ನತಿ ಹೆಸರಲ್ಲಿ ಕೆಲಸದಿಂದ ತೆಗೆಯುವ ಹುನ್ನಾರ ನಡೆದಿದೆ. ಕೆಲಸಗಾರರನ್ನು ಸಂರಕ್ಷಿಸಬೇಕಿದ್ದ ಇಂಧನ ಇಲಾಖೆಯಿಂದಲೇ ಸಿಬ್ಬಂದಿ ಶೋಷಣೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ಹಲವು ಸಿಬ್ಬಂದಿಯನ್ನು ಕೈಬಿಟ್ಟು ಕಾರ್ಮಿಕ ವಿರೋಧಿ ನೀತಿ ಅನುಸರಿಸಲಾಗಿದೆ. ಕೂಡಲೇ ಕಾರ್ಮಿಕ ವಿರೋಧಿ ನೀತಿ ಕೈಬಿಡಲು ಆಗ್ರಹಿಸಿದರು. ಪದೋನ್ನತಿ ಹೆಸರಲ್ಲಿ ಕಾರ್ಮಿಕರನ್ನು ಶೋಷಿಸಿದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.