ಕಲಬುರಗಿ : ಚಿಂಚೋಳಿ ಶಾಸಕ ಉಮೇಶ್ ಜಾಧವ್ ಕಮಲ ಪಾಳಯಕ್ಕೆ ಸೇರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಉಮೇಶ್ ಜಾಧವ್ ಆಗಲಿ ಅಥವಾ ನಮ್ಮ ಪಕ್ಷದ ಮುಖಂಡರಾಗಲಿ ಈ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ ಎಂದು ಆರ್. ಅಶೋಕ್ ತಿಳಿಸಿದರು.
ನಗರದಲ್ಲಿಂದು ಮಾತನಾಡಿದ ಅವರು ಶಾಸಕ ಉಮೇಶ್ ಜಾಧವ್ ರಾಜೀನಾಮೆಗೂ ಬಿಜೆಪಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅವರನ್ನು ಪಕ್ಷಕ್ಕೆ ಕರೆ ತರುವ ಪ್ರಯತ್ನ ಅಥವಾ ಪ್ರೇರಣೆ ನಾವು ಮಾಡಿಲ್ಲ. ಸ್ವಯಂ ಪ್ರೇರಿತವಾಗಿ ಯಾರೆ ಪಕ್ಷಕ್ಕೆ ಬರುವುದಾದರೆ ಸ್ವಾಗತ ಕೋರುತ್ತವೆ. ಕಾಂಗ್ರೆಸ್ನಲ್ಲಿರುವ ರಾಜಕೀಯ ಗೊಂದಲ, ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿ ಕುಂಠಿತ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿಯಿಂದ ಬೇಸತ್ತು ಜಾಧವ್ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ನಲ್ಲಿ ಒಳ ಬೇಗುದಿ ಇದೆ. ಅವರವರೆ ಹೊಡೆದಾಡಿಕೊಳ್ಳುತ್ತಿದ್ದಾರೆ. ಹಾಗಂತ ಕಾಂಗ್ರೆಸ್ ಒಳ ಬೇಗುದಿ ಬಳಸಿಕೊಂಡು ರಾಜಕೀಯವಾಗಿ ಲಾಭ ನಾವು ಪಡೆಯುವುದಿಲ್ಲ. ಬಿಜೆಪಿ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಬರುವುದಾದರೆ ಅಂಥವರಿಗೆ ನಾವು ಸ್ವಾಗತಿಸುತ್ತೇವೆ ಎಂದರು.
ಇನ್ನು ಜಾದವ್ ಬಿಜೆಪಿ ಸೇರಲು ಕೆಲ ಬಿಜೆಪಿಗರೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅವರನ್ನ ಹೇಗೆ ಶಮನಗೊಳಿಸುತ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿ ಜಾಧವ್ ಇನ್ನೂ ಪಕ್ಷಕ್ಕೆ ಬಂದಿಲ್ಲ. ಬಂದ ಮೇಲೆ ಅಸಮದಾನದ ಬಗ್ಗೆ ವಿಚಾರ ಮಾಡುವದಾಗಿ ಹೇಳಿದರು.