ಕಲಬುರಗಿ: ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪೆಟ್ರೋಲಿಂಗ್ ಹಾಗೂ ಬೀಟ್ ವ್ಯವಸ್ಥೆ ಹೆಚ್ಚಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ ತಿಳಿಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಮಿಷನರ್ ಆಗಿ ಬಂದ ಮೇಲೆ ಕ್ರೈಮ್, ಟ್ರಾಫಿಕ್ ಸೇರಿ ಎಲ್ಲ ವಿಭಾಗಗಳಿಗೆ ಒತ್ತು ನೀಡಿರುವುದಾಗಿ ತಿಳಿಸಿದರು. ಕೊರೊನಾ ಸಂದರ್ಭದಲ್ಲಿ ಗಸ್ತಿಗೆ ಹಿನ್ನಡೆಯಾಗಿದ್ದು, ಕೆಳ ಹಂತದ ಅಧಿಕಾರಿಗಳು ಮಾತ್ರ ಗಸ್ತು ತಿರುಗುತ್ತಿದ್ದರು. ಆದ್ರಿಗ ಸಮಗ್ರವಾಗಿ ಪರಿಶೀಲಿಸಿ, ಪೆಟ್ರೋಲಿಂಗ್ ಬೀಟ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಸಿಪಿ ನೇತೃತ್ವದಲ್ಲಿ ಮೂರು ಜನ ಇನ್ಸ್ಪೆಕ್ಟರ್ಗಳ ಸಹಾಯದಲ್ಲಿ ಗಸ್ತು ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕೊಲೆ, ಸುಲಿಗೆ, ಕಳ್ಳತನ ತಡೆಯಲು ಸಹಾಯವಾಗಲಿದೆ ಎಂದರು.
ಕೊರೊನಾ ಕಾರಣದಿಂದ ಹಳ್ಳಿಗಳಿಗೆ ಹೋಗಿ ಬೀಟ್ ವ್ಯವಸ್ಥೆ ಮಾಡಲು ಆಗಿರಲಿಲ್ಲ. ಈಗ ಸಿಬ್ಬಂದಿಯನ್ನು ಚುರುಕುಗೊಳಿಸಲಾಗಿದೆ. ಸ್ಥಳೀಯ ಮಟ್ಟದಲ್ಲಿಯೇ ಸಿಬ್ಬಂದಿ ಗ್ರೌಂಡ್ ವರ್ಕ್ ಮಾಡಿ ಅಪರಾಧ ಕೃತ್ಯಗಳನ್ನು ಆಭಂಭದಲ್ಲಿಯೇ ತಡೆಯಲು ಕಾರ್ಯಯೋಜನೆ ರೂಪಿಸಲಾಗಿದೆ. ಇನ್ನು 112 ಸಹಾಯವಾಣಿಗೆ ತಿಂಗಳಲ್ಲಿ 750 ಕರೆಗಳು ಬಂದಿದ್ದು, ಎಲ್ಲ ಕರೆಗಳಿಗೆ ಸ್ಪಂದಿಸುವ ಕೆಲಸ ಆಗಿದೆ. ಇದಕ್ಕಾಗಿ 12 ವಾಹನಗಳು ಕಾರ್ಯ ವಿರ್ವಹಿಸುತ್ತಿವೆ.
ಚಿಕ್ಕಪುಟ್ಟ ಜಗಳದಿಂದ ಹಿಡಿದು ಯಾವುದೇ ಸಮಸ್ಯೆ ಇದ್ದರೂ 112 ಸಹಾಯವಾಣಿಗೆ ಕರೆ ಮಾಡಬಹುದು. ನಮ್ಮ ಮನೆಗೆ ಬಂದು ಹೋಗಿ, ನಮಗೆ ಸುರಕ್ಷತೆ ಭಾವನೆ ಮೂಡುತ್ತದೆ ಅಂತ ಕರೆ ಬಂದರೂ ಸಹ ಸ್ಪಂದಿಸುವ ಕಾರ್ಯ ಮಾಡಲಾಗುವುದು ಎಂದರು.
ಸದ್ಯ ಲಾಕ್ಡೌನ್ ಮುಗಿದಿದ್ದು, ಸಮಾಜಘಾತುಕ ಶಕ್ತಿಗಳು ಮತ್ತೆ ಮರುಜೀವ ಪಡೆದಿವೆ. ಇವುಗಳಿಗೆ ಕಡಿವಾಣ ಹಾಕಲು ಹದ್ದಿನ ಕಣ್ಣು ಇಡಲಾಗಿದೆ. ಮಾರಕಾಸ್ತ್ರ ತಯಾರಿ, ಮಾರಾಟ, ಸಂಗ್ರಹ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.
ಇದನ್ನೂ ಓದಿ: ಬರೀ ಟೀಕೆಯಲ್ಲ ನಾವು ಮಾಡಿದ ಕೆಲಸವನ್ನೂ ಸ್ವೀಕರಿಸಲಿ : ಸಚಿವ ಕೆ ಎಸ್ ಈಶ್ವರಪ್ಪ ಕಿವಿಮಾತು
ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ 5 ಸಾವಿರ ಸಿಸಿಟಿವಿ ಕ್ಯಾಮರಾ ಇರಬೇಕಾಗಿತ್ತು. ಈಗ ಕೇವಲ 1 ಸಾವಿರ ಸಿಸಿಟಿವಿ ಕ್ಯಾಮರಾ ಮಾತ್ರ ಇವೆ. ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಳ್ಳಲು ಸಾರ್ವಜನಿಕರು ಮುಂದಾಗುವಂತೆ ಆಯುಕ್ತರು ಮನವಿ ಮಾಡಿದರು. ಸಿಗ್ನಲ್ ವಿಷಯವಾಗಿ ಈಗಾಗಲೇ ಪಾಲಿಕೆ ಆಯುಕ್ತರ ಜೊತೆ ಚರ್ಚೆ ಮಾಡಲಾಗಿದೆ. ವೃತ್ತಗಳನ್ನು ಅಭಿವದ್ಧಿ ಪಡಿಸುವ ವೇಳೆ ಹೊಸ ಸಿಗ್ನಲ್ಗಳನ್ನು ಅಳವಡಿಸಲಾಗುವದು ಎಂದು ಆಯುಕ್ತರು ತಿಳಿಸಿದರು.