ಹಾವೇರಿ : ಪ್ರೀತಿಸಿ ಮದುವೆಯಾದ ಅಂತರ್ಜಾತಿ ಜೋಡಿಯೊಂದು ಪೋಷಕರಿಂದಲೇ ಬೆದರಿಕೆ ಇದ್ದು, ರಕ್ಷಣೆ ನೀಡಿ ಅಂತಾ ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡಿದೆ.
ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಮಂಜು ಮತ್ತು ಶೃತಿ ಎಂಬುವರ ಕಳೆದು ಎರಡುವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಪೋಷಕರು ಮದುವೆಗೆ ಒಪ್ಪಿರಲಿಲ್ಲ.
ಈ ನಡುವೆ ಯುವತಿ ಪೋಷಕರು ಮಗಳಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಲು ಮುಂದಾಗಿದ್ದರು. ಇದರಿಂದ ನೊಂದ ಯುವಕ-ಯುವತಿ ಫೆಬ್ರವರಿ 21ರಂದು ಹಾನಗಲ್ ಉಪನೋಂದಣಿ ಕಚೇರಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಇತ್ತ ಯುವತಿಯ ತಂದೆ ಮಗಳು ಕಾಣೆಯಾಗಿದ್ದಾಳೆಂದು ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಅಲ್ಲದೆ ಹುಡುಗನ ಸಂಬಂಧಿಕರಿಗೆ, ಸ್ನೇಹಿತರಿಗೆ ಕರೆ ಮಾಡಿ ಯುವಕ ಮಂಜುನನ್ನು ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಇದರಿಂದ ನಮ್ಮ ಕುಟುಂಬದಲ್ಲಿ ನೆಮ್ಮದಿ ದೂರಾಗಿದ್ದು, ಆತಂಕದಲ್ಲಿ ಜೀವಕಳೆಯಬೇಕಾಗಿದೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯುವಕ ಮಂಜು ಆತಂಕ ವ್ಯಕ್ತಪಡಿಸಿದ್ದಾರೆ.
ಶೃತಿ ತಂದೆ -ತಾಯಿ ಬೇರೆ ಹುಡುಗನ ಜೊತೆ ಮದುವೆ ಮಾಡಲು ಹೊರಟ್ಟಿದ್ದರು. ಆಗ ಇಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿ, ಉಪನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದೇವೆ. ಶೃತಿ ಪೋಷಕರು ಶ್ರೀಮಂತರು, ನಾನು ಬಡವ. ದೊಡ್ಡ ದೊಡ್ಡ ವ್ಯಕ್ತಿಗಳು ಅವರ ಸಂಪರ್ಕದಲ್ಲಿದ್ದಾರೆ.
ನನಗೆ ಯಾವುದೂ ಬೇಡ, ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ. ಎಲ್ಲಿಯಾದರು ಬದುಕಿಕೊಳ್ಳುತ್ತೇವೆ ಎಂದು ಮಂಜು, ಶೃತಿ ಪೋಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾವು ಬಡವರು, ನಮಗೆ ಮನೆ ಇಲ್ಲ. ಲಕ್ಷ ರೂಪಾಯಿ ಸಾಲಮಾಡಿ ಮನೆ ಕಟ್ಟುತ್ತಿದ್ದೇನೆ. ನಾವು ಇಟ್ಟಿಗಿ ಭಟ್ಟೆಯಲ್ಲಿ ಕೆಲಸ ಮಾಡಿ ಬದುಕು ನಡೆಸುತ್ತಿದ್ದೇವೆ. ನನ್ನ ಮಗ ನನಗೆ ಗೊತ್ತಿಲ್ದದಂತೆ ಈ ತಪ್ಪು ಮಾಡಿದ್ದಾನೆ.
ನನಗೆ ಹೆಣ್ಣುಮಕ್ಕಳಿಲ್ಲ. ಸೊಸೆಯನ್ನು ಮಗಳಂತೆ ನೋಡಿಕೊಳ್ಳುತ್ತೇನೆ. ಇರುವುದು ಒಬ್ಬನೆ ಮಗ, ದಯವಿಟ್ಟು ಅವನಿಗೆ ತೊಂದರೆ ಮಾಡದಂತೆ ಯುವಕ ಮಂಜು ತಾಯಿ ಗೀತಾ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲಿನ ಡಕಾಯಿತಿ, ಕಳ್ಳತನ ಪ್ರಕರಣಗಳಿಗೆ ಮಾಲೀಕರ ನಿರ್ಲಕ್ಷ್ಯವೇ ಕಾರಣ.. ಅದ್ಹೇಗೆ ಅಂತೀರಾ..