ಹಾವೇರಿ: ಬೆಳ್ತಂಗಡಿಯ ಉಜಿರೆ ರಥಬೀದಿಯಿಂದ ಬಾಲಕನನ್ನು ಅಪಹರಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತೀವ್ರವಾದ ಶೋಧನೆ ನಡೆಸಲಾಗಿದೆ. ಅಪಹರಣ ಮಾಡಿದವರು ಪೊಲೀಸರಿಗೆ ವಿಷಯ ಹೇಳಬೇಡಿ, ಇಪ್ಪತ್ತು ನಾಲ್ಕು ಗಂಟೆ ಒಳಗೆ ಹಣ ಕೊಡಿ ಎಂದು ಹೆದರಿಸಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ಅವರು ಬಹಳ ದೊಡ್ಡ ಖದೀಮರು ಎಂದು ಗೊತ್ತಾಗುತ್ತದೆ ಎಂದರು.
ಈ ಕುರಿತಂತೆ ಮಂಗಳೂರು ಐಜಿಯವರಿಗೆ ಈಗಾಗಲೇ ಸೂಚನೆ ಕೊಟ್ಟಿದ್ದೇನೆ. ಅವರು ವಿಶೇಷ ತಂಡ ರಚಿಸಿಕೊಂಡು ಶೋಧ ಕಾರ್ಯ ಮುಂದುವರೆಸಿದ್ದಾರೆ. ಆದಷ್ಟು ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.