ಹಾಸನ: ಮನುಷ್ಯ ಹುಟ್ಟಿದ ಮೇಲೆ ಸಾಧನೆ ಇಲ್ಲದೇ ಸತ್ತರೆ ಸಾವಿಗೇ ಅವಮಾನ. ಹಾಗೆಯೇ ಆದರ್ಶವಿಲ್ಲದೇ ಬದುಕಿದರೆ ಬದುಕಿಗೇ ಅವಮಾನ ಎಂದು ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಎಂ.ಆರ್.ಸವಿತ ಪ್ರಶಾಂತ್ ಸಲಹೆ ನೀಡಿದರು.
ನಗರದ ಎವಿಕೆ ಕಾಲೇಜು ಸುಶೀಲಮ್ಮ ಹಾರನಹಳ್ಳಿ ರಾಮಸ್ವಾಮಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರೀಡಾ ಹಾಗೂ ಕಾಲೇಜು ದಿನಾಚರಣೆಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಯಾರನ್ನೂ ನೋಡಿಕೊಳ್ಳಲು ಗಮನ ಕೊಡದೆ ಎಲ್ಲವೂ ಸೆಲ್ಫಿಯಲ್ಲಿ ಮುಳುಗಿದೆ. ಪಿಜ್ಜಾ, ಬರ್ಗರ್ ಇತರೆ ಜಂಕ್ ಫುಡ್ ಸೇವಿಸುವ ಕಡೆ ಯುವಪೀಳಿಗೆ ವಾಲಿದೆ. ಮನೆಯಲ್ಲಿ ಮಾಡುವ ರಾಗಿ ಮುದ್ದೆ ಕಂಡರೆ ಆಗುವುದಿಲ್ಲ. ಆದರೆ ಹೊರಗಿನ ಜಂಕ್ ಫುಡ್ ಕಡೆ ಬೇಗ ವಾಲುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದರು.
ಇನ್ನು ವಿದ್ಯಾರ್ಥಿಗಳು ಕೂಡ ಮೊಬೈಲ್ ಬಳಕೆ ಹೆಚ್ಚು ಮಾಡುವುದನ್ನು ಬಿಟ್ಟು, ಪುಸ್ತಕಗಳನ್ನು ಓದಿ ಅವುಗಳನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮೊಬೈಲ್ ಬಳಕೆ ಕಡಿಮೆ ಮಾಡಿ ಪ್ರತಿನಿತ್ಯ ಆರೋಗ್ಯಕರವಾದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಓದುವುದರ ಜೊತೆಯಲ್ಲಿ ಕ್ರೀಡೆ ಹಾಗೂ ದೈಹಿಕ ಸಾಮರ್ಥ್ಯದ ಕಡೆ ಗಮನ ಕೊಡಬೇಕು. ದೇಹದ ಸೌಂದರ್ಯ ಒಂದಿದ್ದರೆ ಸಾಲದು, ಕೆಲಸದಲ್ಲೂ ಚುರುಕಾಗಿರಬೇಕು ಎಂದು ಸಲಹೆ ನೀಡಿದರು.