ಹಾಸನ: ಬೇಲೂರಿನ ಚೌಡನಹಳ್ಳಿ ಬಳಿ ನಡೆದ ಮಂಗಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಪಟ್ಟಂತೆ 11 ನೇ ದಿನದ ಆರಾಧನೆ ನೆರವೇರಿಸುವ ಮೂಲಕ ಶಾಸಕ ಮತ್ತು ಸ್ಥಳೀಯರು ಮಾನವೀಯತೆ ಮೆರೆದರು.
ಇತ್ತೀಚೆಗಷ್ಟೇ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಮಂಗಗಳ ಸಾಮೂಹಿಕ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯ ಬೇಲೂರು ತಾಲ್ಲೂಕಿನ ಚೌಡನಹಳ್ಳಿಯ ತಗರೆ ಎಂಬಲ್ಲಿನ ಅರಣ್ಯದಲ್ಲಿ ಧಾರ್ಮಿಕ ವಿಧಿ-ವಿಧಾನ ಪೂರೈಸಿ ಮೃತಪಟ್ಟ ಮಂಗಗಳಿಗೆ ಪೂಜೆ ಸಲ್ಲಿಸಲಾಗಿದೆ. ಸಂಪ್ರದಾಯದಂತೆ ಹಿಂದೂಪರ ಸಂಘಟನೆ ಹಾಗು ಸ್ಥಳೀಯರಿಂದ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನಡೆಸಲಾಯಿತು.
ಬೆಳೆ ಹಾನಿ ಮಾಡುತ್ತಿವೆ ಎಂದು 38 ಮಂಗಗಳನ್ನು ಹತ್ಯೆ ಮಾಡಲಾಗಿತ್ತು. ಬೇಲೂರು ತಾಲ್ಲೂಕಿನ ತಗರೆ ಮೀಸಲು ಅರಣ್ಯದಲ್ಲಿ 38 ಮಂಗಗಳ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಬೆಳಗ್ಗೆ 10-30- 11 ಗಂಟೆ ಸಮಯದಲ್ಲಿ ಸಮಾಧಿ ಸ್ಥಳವನ್ನು ಸಂಪೂರ್ಣ ಹೂವುಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ. ವಿಷಪ್ರಾಷನ ಆಗಿರುವ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದೇವೆ. ಇಡೀ ದೇಶವೇ ತಲ್ಲಣಗೊಳ್ಳುವಂತೆ ನಡೆದಿದ್ದ ಮೂಕ ಪ್ರಾಣಿಗಳ ಹತ್ಯೆಯ ಬಗ್ಗೆ ಕರ್ನಾಟಕ ಉಚ್ಛ ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸಮಗ್ರ ತನಿಖೆಗೆ ಸೂಚಿಸಿತ್ತು. ಈ ಕೃತ್ಯ ಎಸಗಿದವರು ಈಗಾಗಲೇ ಶಿಕ್ಷೆಗೆ ಒಳಪಟ್ಟಿದ್ದಾರೆ. ಮುಂದೆ ಇಂತಹ ಕೃತ್ಯ ಎಸಗುವವರು ಯೋಚಿಸಬೇಕಾಗಿದೆ.
ಅರಣ್ಯ ಇಲಾಖೆಯವರು ಪ್ರಾಣಿಗಳಿಗಾಗಿ ಬೇಕಾದಂತಹ ಹಣ್ಣು-ಹಂಪಲು ಗಿಡಗಳನ್ನು ಜೊತೆಗೆ ಮರಗಳನ್ನು ಬೆಳೆಸಬೇಕಾಗಿದೆ. ಕೇವಲ ನೀಲಗಿರಿ ಮತ್ತು ಅಕೇಶಿಯಾಗಳನ್ನು ಮಾತ್ರ ಬೆಳೆಸಿದರೆ ಸಾಲದು. ವಿವಿಧ ಜಾತಿಯ ಪ್ರಾಣಿಗಳಿಗೆ ಅನುಕೂಲವಾಗುವಂತಹ ಮರಗಳನ್ನು ಬೆಳೆಸಿದರೆ ಅವು ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬರುವುದು ತಪ್ಪುತ್ತದೆ. ಮುಂದೆ ಇಂತಹ ಕೆಲಸ ಮಾಡಿದರೆ ಉತ್ತಮ ಅಂತ ಶಾಸಕ ಕೆ.ಎಸ್.ಲಿಂಗೇಶ್ ಅರಣ್ಯ ಇಲಾಖೆಗೆ ಸಲಹೆ ನೀಡಿದರು.
ಇದನ್ನೂ ಓದಿ: ಹಾಸನ ಮಂಗಗಳ ಮಾರಣಹೋಮ ಪ್ರಕರಣ: ತನಿಖೆಯಲ್ಲಿ ಬಯಲಾಯ್ತು ಸಾವಿನ ರಹಸ್ಯ