ಸಕಲೇಶಪುರ: ಕಳೆದ 3 ದಿನಗಳಿಂದ ತಾಲೂಕಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಭಾರೀ ಮಳೆ ಗಾಳಿಗೆ ವ್ಯಕ್ತಿಯೋರ್ವ ಬಲಿಯಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಕ್ಯಾಮನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಸಂಕಲಾಪುರ ಮಠದ ಸಿದ್ದಯ್ಯ (60) ಎಂಬ ವ್ಯಕ್ತಿ ಬುಧವಾರ ಸಂಜೆ ದನ ಮೇಯಿಸಿಕೊಂಡು ಮನೆಗೆ ಹೋಗುವಾಗ ಗಾಳಿಯ ಹೊಡೆತಕ್ಕೆ ಗದ್ದೆಯ ಬದಿ ಮೇಲೆ ನಿಲ್ಲಲಾರದೆ ಆಯತಪ್ಪಿ ಎತ್ತಿನ ಹೊಳೆಯೊಳಕ್ಕೆ ಬಿದ್ದು ಮೃತಪಟ್ಟಿರುತ್ತಾರೆ.
ದನಗಳು ಮನೆಗೆ ತಲುಪಿದ್ದು ಮನೆಗೆ ಸಿದ್ದಯ್ಯ ಬರಲಿಲ್ಲವಲ್ಲಾ ಎಂದು ಮನೆಯವರು ಹುಡುಕಿಕೊಂಡು ಹೋದಾಗ ಘಟನಾ ಸ್ಥಳದಿಂದ 10 ಮೀಟರ್ ದೂರದಲ್ಲಿ ಮೃತದೇಹ ಕಂಡು ಬಂದಿರುತ್ತದೆ. ಪೊಲೀಸರು ಗುರುವಾರ ಮುಂಜಾನೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮೃತ ದೇಹವನ್ನು ಕಾರ್ಡ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿರುತ್ತಾರೆ. ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವಸ್ತ್ಯಗೊಂಡಿದೆ.
ಬಹುತೇಕ ರಸ್ತೆಗಳಲ್ಲಿ ಮರಗಳು ವಿದ್ಯುತ್ ವೈರ್ಗಳ ಮೇಲೆ ಬಿದ್ದಿರುವುದರಿಂದ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿವೆ. ವಿರಾಜಪೇಟೆ ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಮಂಜ್ರಾಬಾದ್ ಕೋಟೆ ಸಮೀಪ ಹಲವಡೆ ಮರಗಳು ರಸ್ತೆಯಲ್ಲಿ ವಿದ್ಯುತ್ ವೈರ್ಗಳ ಮೇಲೆ ಬಿದ್ದಿದೆ. ಬ್ಯಾಕರವಳ್ಳಿ ಗ್ರಾ.ಪಂ ವ್ಯಾಪ್ತಿಯ ನಿಡಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಮೇಲ್ಛಾವಣಿ ಸಂಪೂರ್ಣವಾಗಿ ಹಾರಿ ಹೋಗಿರುವುದರಿಂದ ಒಳಗಿದ್ದ ಹಲವಾರು ಗೊಬ್ಬರ ಚೀಲಗಳು ನೀರು ಪಾಲಾಗಿದೆ.
ಬೆಳಗೋಡು ಹೋಬಳಿ ಲೋಕೇಶ್ ಎಂಬುವರ ಮನೆ ಎತ್ತಿನಹೊಳೆ ಯೋಜನೆಯ ಭೂ ಕುಸಿತದಿಂದ ಮನೆ ಬೀಳುವ ಪರಿಸ್ಥಿತಿ ಉಂಟಾಗಿದೆ. ಮಳೆ ಸುರಿಯುತ್ತಿದ್ದರು ಸಹ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಗ್ರಾಮಾಂತರ ಹಾಗೂ ನಗರ ಪ್ರದೇಶದ ಜನ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರುಗಳ ಬ್ಯಾಟರಿ ಮುಖಾಂತರ ಜನ ಮೊಬೈಲ್ ಚಾರ್ಜ್ ಮಾಡಿಕೊಳ್ಳುವ ಪರಿಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ.
ಪಟ್ಟಣದ ಹೊಳೆ ಮಲ್ಲೇಶ್ವರ ದೇವಸ್ಥಾನದ ಮೆಟ್ಟಿಲಿಗೆ ನೀರು ಬಂದಿದ್ದು ಜೊತೆಗೆ ಪಟ್ಟಣದ ಆಜಾದ್ ರಸ್ತೆಗೂ ಸಹ ನೀರು ಪ್ರವೇಶ ಮಾಡಿದ್ದು ಅಲ್ಲಿರುವ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳಿಗೆ ಮಳೆ ಕಡಿಮೆಯಾಗುವವರೆಗೂ ಸ್ಥಳಾಂತರವಾಗುವಂತೆ ತಾಲೂಕು ಆಡಳಿತ ಆದೇಶಿಸಿದೆ.