ಹಾಸನ: ನಾಡಹಬ್ಬ ದಸರಾ ನಂತರ ನಗರದಲ್ಲಿ ನಡೆಯುವ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಆದರೆ ನಗರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಸಿದ್ಧತಾ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಅ.17ರಂದು ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಕೇವಲ 5 ದಿನಗಳು ಮಾತ್ರ ಬಾಕಿ ಇವೆ. ನಗರದಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಹಾಳಾಗಿದ್ದು, ರಸ್ತೆ ಕಾಮಗಾರಿ ತರಾತುರಿಯಲ್ಲಿ ನಡೆದಿದ್ದು, ಆತುರಕ್ಕೆ ಬಿದ್ದು ನಗರಸಭೆ ಅವಾಂತರವನ್ನು ಸೃಷ್ಟಿ ಮಾಡುತ್ತಿದೆ ಎಂಬ ಆತಂಕ ಜನರಲ್ಲಿ ಮೂಡಿದೆ.
ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಅರ್ಧ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಿದ್ದು, ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಸುರಸ್ತೆ ಕಾರ್ಯದಿಂದ ನೀರು ಸರಬರಾಜು ಪೈಪ್ ಒಡೆದಿದ್ದು, ಇದನ್ನು ಗಮನಿಸಿದ ಗುತ್ತಿಗೆದಾರ ಡಾಂಬರು ಹಾಕಿದ್ದು, ಡಾಂಬರು ಹಾಕಿದ ರಸ್ತೆಗೆ ನೀರು ನುಗ್ಗಿ ಕೆರೆಯಂತಾಗಿದೆ. ಇಷ್ಟು ದುಸ್ತರವಾಗಿ ಮಾಡಿರುವ ಈ ಕಾಮಗಾರಿ ಎಷ್ಟು ದಿನ ಬಾಳಿಕೆ ಬರುವುದು ಎಂಬುದು ಒಂದು ಪ್ರಶ್ನೆಯಾದರೆ, ಅಧಿಕಾರಿಗಳ ನಿರ್ಲಕ್ಷಕ್ಕೆ ಸರ್ಕಾರಿ ಹಣ ಪೋಲಾಗುತ್ತಿರುವುದು ಮತ್ತೊಂದು ದುರಂತವಾಗಿದೆ.
ಎನ್ಆರ್ ವೃತ್ತದಿಂದ ಸಂತೆಪೇಟೆ ಮಾರ್ಗವಾಗಿ ದೇವಾಲಯಕ್ಕೆ ಹೋಗುವ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಶೇ.25ರಷ್ಟು ಕೆಲಸ ಬಾಕಿ ಇದೆ. ಉಳಿದಿರುವ ಕಾಮಗಾರಿ ಕೇವಲ 5 ದಿನಗಳಲ್ಲಿ ಮುಗಿಯುವುದೆ ಎಂಬ ಅನುಮಾನ ಉಂಟಾಗಿದೆ. ದೇವಾಲಯ ಸುತ್ತಮುತ್ತ ರಸ್ತೆಗಳಲ್ಲಿ ಅಪಘಾತ ಉಂಟು ಮಾಡುವ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ನಗರಸಭೆ ಅಧಿಕಾರಿಗಳು ಅಲ್ಲಲ್ಲಿ ಕಲ್ಲು ಮಣ್ಣು ಸುರಿದು ಕೆಲ ರಸ್ತೆಗಳು ಬಂದ್ ಮಾಡಿದ್ದಾರೆ.
ಹಾಸನಾಂಬೆ ದೇವಾಲಯಕ್ಕೆ ಪ್ರತಿವರ್ಷ ಕೋಟಿ ಕೋಟಿ ಆದಾಯ ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ಬರುತ್ತಿದ್ದರು ಜಿಲ್ಲಾಡಳಿತ ಮಾತ್ರ ದೇವಾಲಯದ ಅಭಿವೃದ್ಧಿಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನೂರಾರು ವರ್ಷಗಳಿಂದ ಅಪಾರ ಭಕ್ತರನ್ನು ದೇವಾಲಯ ಹೊಂದಿದ್ದರು ಇಲ್ಲಿಯವರೆಗೂ ಶಾಶ್ವತ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೇವಲ ಒಂದು ವಾರ ಮಾತ್ರ ಬಾಕಿ ಇರುವಾಗ ಕೆಲಸಗಳು ಮಾಡುತ್ತಿದ್ದು, ಜಿಲ್ಲಾಡಳಿತ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.