ಹಾಸನ: ವಿಧಾನ ಪರಿಷತ್ ಉಪ ಸಭಾಪತಿಯನ್ನು ಎಳೆದಾಡಿದ ವಿಚಾರವಾಗಿ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ನಮ್ಮದೊಂದು ಸಣ್ಣ ಪ್ರಾದೇಶಿಕ ಪಕ್ಷ. ಇವೆಲ್ಲವನ್ನು ಜನತೆಯೇ ನೋಡಿಕೊಳ್ಳುತ್ತಾರೆ. ಅವರಿಗೇ ಬಿಡುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದರು.
ಪ್ರಜ್ವಲ್ ರೇವಣ್ಣನವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ನಡೆದಂತಹ ಘಟನೆ ರಾಜ್ಯವಲ್ಲ ರಾಷ್ಟ್ರವೇ ತಲೆತಗ್ಗಿಸುವಂತಹ ಕೆಲಸವಾಗಿದೆ. ಇಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ. ಜನರೇ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತಾರೆ ಎಂದರು.
ರೈತರ ಸಮಸ್ಯೆಗೆ ಹಸಿರು ಶಾಲು, ಸಾರಿಗೆ ನೌಕರರ ಸಮಸ್ಯೆಗೆ ಖಾಕಿ ಹಾಕಿ
ಸಾರಿಗೆ ನೌಕರರ ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿದ್ದು, ಕಾಂಗ್ರೆಸ್ ನಾಯಕರೊಬ್ಬರು ಪ್ರತಿಭಟನೆಯಲ್ಲಿ ಕುಳಿತಿದ್ದರು ಎಂಬ ಕಾರಣಕ್ಕೆ ಇರಬಹುದು. ರೈತರ ಸಮಸ್ಯೆ ಬಂದಾಗ ಹಸಿರು ಶಾಲು, ಕೆಎಸ್ಆರ್ಟಿಸಿ ನೌಕರರ ಪ್ರತಿಭಟನೆ ಬಂದಾಗ ಖಾಕಿ ಬಟ್ಟೆ ಹಾಕಿಕೊಂಡು ಪ್ರತಿಭಟನೆಗೆ ಕೂರಲಿ ಎಂದು ಲೇವಡಿ ಮಾಡಿದರು. ಅಲ್ಲದೆ ಮುಖ್ಯಮಂತ್ರಿಗಳು ನೌಕರರ ಕಾಲು ಹಿಡಿದು ಕೆಲಸಕ್ಕೆ ಬನ್ನಿ ಎಂದು ಕರೆಯುವ ಪರಿಸ್ಥಿತಿಗೆ ಬಂದಿರುವು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಸರ್ಕಾರಿ ನೌಕರರನ್ನಾಗಿ ಮಾಡಿ ಎನ್ನುವುದು ಎಷ್ಟು ಸರಿ
ಸಾರಿಗೆ ನೌಕರರ ಸಮಸ್ಯೆ ಇದ್ದರೆ ಸರ್ಕಾರದ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಪ್ರತಿಭಟನೆ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಸಾರಿಗೆ ನೌಕರರಿಗೆ ಬೇಕಾದ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲವನ್ನೂ ಸರ್ಕಾರ ಒದಗಿಸಬೇಕು. ಆದರೆ ನಿಗಮ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆನ್ನುವುದು ಎಷ್ಟು ಸರಿ. ದೇಶಕ್ಕೆ ಅನ್ನ ಕೊಡುತ್ತಿರುವವರು ರೈತರು. ಬೆಳಗ್ಗೆ ಎದ್ದು ಹಾಲು ಕರೆದು ಡೈರಿಗೆ ಹಾಕುತ್ತಿರುವ ರೈತ ಮತ್ತು ಡೈರಿಯ ಕಾರ್ಯದರ್ಶಿಗಳನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ನಾನು ಕೂಡ ಒತ್ತಾಯ ಮಾಡುತ್ತೇನೆ ಎಂದರು.
ಕೋಡಿಹಳ್ಳಿ ನಾಟಕವಾಡುತ್ತಿದ್ದಾರೆ
ಸಂಬಂಧ ಇಲ್ಲದವರ ಮಾತನ್ನು ಕೇಳಿ ನೌಕರರು ಬೀದಿಗಿಳಿದು ಪ್ರತಿಭಟಿಸುವುದು ತರವಲ್ಲ. ಕೋಡಿಹಳ್ಳಿ ರೈತರ ಪರಿಸ್ಥಿತಿಯನ್ನು ಗಮನಿಸುತ್ತಿಲ್ಲ. ರೈತರ ಬೇಡಿಕೆಗಳೇ ಇನ್ನೂ ಈಡೇರಿಲ್ಲ ಎಂದಮೇಲೆ ಸಾರಿಗೆ ಸಂಸ್ಥೆ ನೌಕರರ ಪರವಾಗಿ ಹೋಗುವುದು ಎಷ್ಟು ಸರಿ. ಒಂದು ದಿನ ಹಸಿರು ಟವಲ್, ಮತ್ತೊಂದು ದಿನ ಬೇರೆ ಹಾಕಿಕೊಂಡು ನಾಟಕವಾಡುತ್ತಾರೆ. ಇದು ಒಳ್ಳೆಯದಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದರು.