ಹಾಸನ: ಹಾಸನ ಜಿಲ್ಲೆಯ ಜನ ಇಲ್ಲಿಯವರೆಗೆ ಮಾನದಂಡವನ್ನು ನೋಡದೇ ಕುಟುಂಬ ರಾಜಕಾರಣಕ್ಕೆ ತಾವು ಜೀತ ಪದ್ಧತಿಯಂತೆ ದುಡಿಯುತ್ತಿದ್ದೀರಿ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ಪಟ್ಟಣದ ಬಸವರಾಜೇಂದ್ರ ಶಾಲಾ ಆವರಣದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದ ಅವರು, ಅಪ್ಪ ರಾಜ ಅನ್ನೋ ಕಾರಣಕ್ಕೆ ಅವನ ಮಗನನ್ನೇ ರಾಜನನ್ನಾಗಿ ಮಾಡುವ ರಾಜ ಪರಂಪರೆ ದೇಶದಲ್ಲಿ ಕಿತ್ತುಹಾಕಿ, ಪ್ರಜಾಪ್ರಭುತ್ವವವನ್ನು ಹಲವು ವರ್ಷಗಳ ಹಿಂದೆಯೇ ಜಾರಿಗೆ ತರಲಾಗಿದೆ. ಆದ್ರೆ ಹಾಸನದಲ್ಲಿ ಯಾಕೋ ಆ ಪದ್ಧತಿಯನ್ನು ಬದಲಾಯಿಸಲು ಜನರು ನಿರ್ಧಾರ ಮಾಡುತ್ತಿಲ್ಲ. ಆದರೆ ಈ ಬಾರಿ ಖಂಡಿತ ಬದಲಾವಣೆ ಬಯಸಿದ್ದಾರೆ. ಮೋದಿ ಸರ್ಕಾರಕ್ಕೆ ಹಾಸನದಿಂದಲೂ ಒಂದು ಕಮಲವನ್ನು ಇಲ್ಲಿನ ಮತದಾರರು ಕೊಡುಗೆ ನೀಡಲಿದ್ದಾರೆ ಎಂಬ ಭರವಸೆ ಇದೆ ಎಂದರು.
ಮೋದಿ ನೇತೃತ್ವದ ಎನ್ಡಿಎ ಸರ್ಕಾರದ 5 ವರ್ಷಗಳ ಸಾಧನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಚಕ್ರವರ್ತಿ ಸೂಲಿಬೆಲೆ ಅವರು, ಏತಕ್ಕಾಗಿ ನಾವು ಮೋದಿ ಪರವಾಗಿ ಮತಚಲಾಯಿಸಬೇಕು ಎಂಬುದನ್ನು ವಿಶ್ಲೇಷಣೆ ಸಹಿತ ವಿವರಿಸಿದರು. ನೆರೆದಿದ್ದ ಸುಮಾರು 2000 ಕ್ಕೂ ಹೆಚ್ಚು ಜನರಿಂದ ಘೋಷಣೆಗಳನ್ನು ಕೂಗಿಸಿದರು.