ಹಾಸನ : ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಕುರಿತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಹಿಸಿದೆ. ಹಾಗಾಗಿ ಸಾರ್ವಜನಿಕರು ಭಯಪಡುವ ಅವಶ್ಯಕತೆ ಇಲ್ಲ. ಎಪಿಎಂ‘ಸಿ ಮಾರುಕಟ್ಟೆಯಲ್ಲಿ ಯಾವುದೇ ಲೋಪದೋಷ ಕಂಡು ಬಂದಲ್ಲಿ, ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಭರವಸೆ ನೀಡಿದ್ದಾರೆ.
![ಸಂಸದ ಪ್ರಜ್ವಲ್ ರೇವಣ್ಣ](https://etvbharatimages.akamaized.net/etvbharat/prod-images/kn-hsn-03-06-meeting-avb-ka10026_03042020195928_0304f_1585924168_536.jpg)
ಚಿಲ್ಲರೆ ಮಾರಾಟಗಾರರಿಗೆ ಎಪಿಎಂಸಿಯಲ್ಲಿ ಮುಕ್ತವಾಗಿ ವ್ಯಾಪಾರ ಮಾಡಲು ಹಾಗೂ ಓಡಾಡಲು ಅವಕಾಶ ಕಲ್ಪಸಿ ಕೊಡಲಾಗಿದೆ. ದವಸ ಧಾನ್ಯಗಳನ್ನ ಹೊರ ರಾಜ್ಯದೊಂದಿಗೆ ಖರೀದಿಸಲು ಅವಕಾಶ ನೀಡಿದ್ದು, ಸಾಗಣೆ ಮಾಡಲು ತೊಂದರೆಯಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರೆ ಅವಕಾಶ ಕಲ್ಪಿಸುತ್ತಾರೆ ಎಂದರು.
ಸಗಟು ಔಷದ ಮಾರಾಟಗಾರರ ತಾಲೂಕಿನ ಎರಡು ವಾಹನಗಳಿಗೆ ಪರವಾನಗಿ ನೀಡಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಕೊರತೆ ಇರುವ ತಾಲೂಕುಗಳಿಗೆ ಔಷಧಗಳ ಸರಬರಾಜು ಮಾಡುತ್ತಾರೆ. ಮೆಡಿಕಲ್ ಶಾಪ್ಗಳಿಗೆ ಔಷಧಗಳ ಸರಬರಾಜಿನ ಅವಶ್ಯಕತೆ ಉಂಟಾದರೆ, ಅಲ್ಲಿಯ ತಾಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಿದ್ರೆ, ಅವರು ಔಷಧ ತಲುಪಿಸುವ ಕಾರ್ಯ ಮಾಡುತ್ತಾರೆ ಎಂದರು.
ಹಾಸನ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಜನರು ಮುಂಜಾಗ್ರತೆ ವಹಿಸದೇ ಅನಾವಶ್ಯಕವಾಗಿ ಹೊರಗಡೆ ಬರಬಾರದು. ದ್ವಿಚಕ್ರ ವಾಹನಗಳಲ್ಲಿ ಯುವಕರು ಅನವಶ್ಯಕವಾಗಿ ಓಡಾಡುತ್ತಿದ್ದು, ಅವರ ವಿರದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ತಿಳಿಸಿದರು.