ಹಾಸನ: ನಾನು ಇಷ್ಟು ದಿನ ಹಠ ಮಾಡಿದ್ದು ಬಿಜೆಪಿ ಸೋಲಿಸುವುದಕ್ಕಾಗಿ. ದೇವೇಗೌಡರ ಆರೋಗ್ಯ ಸ್ಥಿತಿ ಕಂಡು ನನಗೆ ತುಂಬಾ ನೋವಾಗಿದೆ. ಪಕ್ಷಕ್ಕಿಂತ, ಹಿರಿಯರ ಮಾತಿಗಿಂತ ನಾನು ದೊಡ್ಡವಳಲ್ಲ. ಹಾಗಾಗಿ ನಾನೇ ಸ್ವರೂಪ್ಗೆ ಟಿಕೆಟ್ ಕೊಡಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿ ಟಿಕೆಟ್ ಕೊಡಿಸಿದ್ದೇನೆ ಎಂದು ಬಹಿರಂಗವಾಗಿ ಭವಾನಿ ರೇವಣ್ಣ ಹೇಳಿದರು.
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿಂದು ಮಾತನಾಡಿದ ಅವರು, ನಾನು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಬಿಜೆಪಿಯನ್ನು ಸೋಲಿಸುವುದಕ್ಕಾಗಿ. ಯಾಕೆಂದರೆ ಪ್ರಕಾಶ್ ನಿಧನದ ಬಳಿಕ ಕ್ಷೇತ್ರದಲ್ಲಿ ದುರಾಡಳಿತ ಜಾಸ್ತಿಯಾಗಿದೆ. ಅದನ್ನು ಮಟ್ಟ ಹಾಕಬೇಕಾದರೆ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಅವರು ಹಾಕಿದ ಸವಾಲಿಗೆ ಪ್ರತಿ ಸವಾಲು ತೀರಿಸಿಕೊಳ್ಳುವುದಕ್ಕಾಗಿ ನಾನು ಹಠ ಹಿಡಿದೆ. ಅದನ್ನು ಹೊರತುಪಡಿಸಿ ಬೇರೆ ಯಾವ ಉದ್ದೇಶವೂ ನನಗೆ ಇರಲಿಲ್ಲ ಎಂದರು.
ಕ್ಷೇತ್ರದ ಜನರು ಸ್ವರೂಪ ಮೇಲೆ ಇಟ್ಟಿರುವ ನಂಬಿಕೆಗೆ, ನಾನು ಕೂಡ ಯೋಚಿಸಿದೆ. ದೊಡ್ಡವರ (ದೇವೇಗೌಡರ) ಆರೋಗ್ಯ ಪ್ರತಿದಿನ ಕ್ಷೀಣಿಸುತ್ತಿದ್ದು, ಅವರ ಆರೋಗ್ಯಕ್ಕಿಂತ ಮತ್ತು ಹಿರಿಯರ ಮಾತಿಗಿಂತ ನಾನು ದೊಡ್ಡವಳಲ್ಲ. ಹಾಗಾಗಿ, ಒಂದು ನಿರ್ಧಾರಕ್ಕೆ ಬಂದು ನಾನೇ ಕುಮಾರಸ್ವಾಮಿಯವರಿಗೆ ಕರೆ ಮಾಡಿ ಹೇಳಿದೆ. ಇವತ್ತು ಶುಕ್ರವಾರ, ಹಾಗಾಗಿ ನಾಮಪತ್ರ ಸಲ್ಲಿಸಲು ಸ್ವರೂಪ್ ಅವರಿಗೆ ಟಿಕೆಟ್ ನೀಡಿ ಅಂತ ಹೇಳಿದ್ದೆ ಎಂದು ತಿಳಿಸಿದರು.
ಸ್ವರೂಪ್ ನನ್ನ ಮಗನಿದ್ದಂತೆ. ನಾನು ಯಾವಾಗಲೂ ಅವನನ್ನು ಅದೇ ರೀತಿ ನೋಡಿದ್ದೇನೆ. ಮಾಜಿ ಶಾಸಕರಾದ ಪ್ರಕಾಶ್ ಇದ್ದಾಗಲೂ ಕೂಡ ಆತ ನನ್ನನ್ನು ಅಮ್ಮ ಎಂದೇ ಕರೆಯುತ್ತಿದ್ದ. ನಾನು ಈ ಮೊದಲು ಕೂಡ ಹೇಳಿದ್ದ. ನನಗೆ ಸೂರಜ್ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರೂ ನನ್ನ ಮಕ್ಕಳಂತೆ. ಆತನಿಗೆ ಇವತ್ತು ಮನಸ್ಪೂರ್ವಕವಾಗಿ ಆಶೀರ್ವಾದ ಮಾಡುತ್ತಿದ್ದೇನೆ. ಗೆಲ್ಲಿಸುವ ಹೊಣೆ ನಿಮ್ಮದು. ಹಾಸನ ಕ್ಷೇತ್ರದಲ್ಲಿ ಬಿಜೆಪಿಯ ದುರಾಡಳಿತ ನಿಲ್ಲಬೇಕು ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳು ಮತ್ತೆ ಜೆಡಿಎಸ್ ಚುಕ್ಕಾಣಿ ಹಿಡಿಯಬೇಕು ಎಂಬುದು ನನ್ನ ಆಸೆ. ಅದಕ್ಕಾಗಿ ಕುಮಾರಸ್ವಾಮಿ ಹಗಲಿರುಳು ಹೋರಾಟ ನಡೆಸುತ್ತಿದ್ದಾರೆ. ಕಾರ್ಯಕರ್ತರಾದ ನೀವುಗಳು ಕೂಡ ಇನ್ನು ಮುಂದೆ ಕಡಿಮೆ ಸಮಯ ನಿದ್ದೆ ಮಾಡುವ ಜೊತೆಗೆ ಸ್ವರೂಪ್ ಪ್ರಕಾಶ್ ಅವರನ್ನು ಶಾಸಕರನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಲಸಿಗರಿಗೆ ಮಣೆ: 12 ಅಭ್ಯರ್ಥಿಗಳನ್ನು ಬದಲಿಸಿದ ಜೆಡಿಎಸ್; 7 ಕ್ಷೇತ್ರಗಳಲ್ಲಿ ಬಾಹ್ಯ ಬೆಂಬಲ ಘೋಷಣೆ