ಗದಗ: ಲಾಕ್ಡೌನ್ ಹಿನ್ನೆಲೆ ನಿರ್ಗತಿಕರು ಅನ್ನಕ್ಕೂ ಪರದಾಡುವಂತಾಗಿದೆ. ಬೆಟಗೇರಿಯ ಕಬಾಡಿ ಓಣಿಯ ಅಂಬಾ ಭವಾನಿ ದೇವಸ್ಥಾನ ಬಳಿ ಅನಾಮಧೇಯ ವ್ಯಕ್ತಿಯೊಬ್ಬ ಮಲಗಿದ್ದು, ಆತನನ್ನು ನೋಡಿ ಜನ ಭಯಭೀತರಾಗಿದ್ದಾರೆ.
ನಾಯಿಗಳು ಮೈ ಮೇಲೆ ಓಡಾಡಿದರೂ ಸ್ವಲ್ಪವೂ ಅಲುಗಾಡದೆ ಗೋಡೆಯ ಪಕ್ಕದಲ್ಲಿ ವ್ಯಕ್ತಿ ಮಲಗಿದ್ದ. ಜನರು ಎಷ್ಟೇ ಎಚ್ಚರಿಸಿದರೂ ಆತ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಇದರಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ಜನ ಆತಂಕ, ಭಯದಲ್ಲಿ ಓಡಾಡಿದ್ದರು. ಕೊರೊನಾ ವೈರಸ್ ಭಯದಲ್ಲಿರುವ ಜನ ಆ ವ್ಯಕ್ತಿಯ ಸಮೀಪ ಸುಳಿಯೋಕೂ ಹಿಂದೇಟು ಹಾಕಿದ್ದಾರೆ.
ಬಳಿಕ ಸಂಜೆ ಹೊತ್ತಿಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಆತನನ್ನು ಎಚ್ಚರಿಸಿ ನೀರು ಕೊಟ್ಟು ಉಪಚರಿಸಿದರು. ನಾಲ್ಕು ದಿನಗಳಿಂದ ಊಟ, ನೀರು ಇಲ್ಲದೆ ಆತ ನಿಶಕ್ತನಾಗಿದ್ದ. ಮಾನಸಿಕ ಅಸ್ವಸ್ಥನಂತೆ ಜನರಿಗೆ ಅನಿಸಿದ ಬಳಿಕ ಆತನಿಗೆ ನೀರು, ಊಟ ಕೊಟ್ಟು ಮಾನವೀಯತೆ ಮೆರೆದರು. ಆತನನ್ನ ನೋಡಲು ಜನ ಜಮಾಯಿಸಿದ್ದರು. ಸ್ಥಳಕ್ಕೆ ಪೊಲೀಸರು ಸಹ ಬಂದು ಪರಿಶೀಲನೆ ನಡೆಸಿದ್ದಾರೆ.