ಗದಗ: ಸದ್ಯ ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರ್ತಿಲ್ಲ. ಬದಲಿಗೆ ಕೊಳ್ಳುವಾಗ ಗ್ರಾಹಕರ ಕಣ್ಣಲ್ಲಿ ನೀರು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟರ ಮಟ್ಟಿಗೆ ಈರುಳ್ಳಿ ಬೆಲೆ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಲದಲ್ಲಿ ರೈತ ಕಚ್ಟಪಟ್ಟು ಬೆಳೆದಿದ್ದ ಈರುಳ್ಳಿ ಚೀಲಗಳನ್ನು ಕಳ್ಳರು ಎಗರಿಸಿರುವ ಘಟನೆ ಜಿಲ್ಲೆ ನೆರೆಗಲ್ ಪಟ್ಟಣದಲ್ಲಿ ನಡೆದಿದೆ.
ಸದ್ಯ ಕ್ವಿಂಟಾಲ್ ಉಳ್ಳಾಗಡ್ಡಿಯ ಬೆಲೆ ಹತ್ತು ಸಾವಿರ ರೂಪಾಯಿ ಗಡಿ ದಾಟಿದ್ದು, ಬಂಗಾರದ ಬೆಲೆ ಬಂದಿದೆ. ಈ ಸಂಗತಿ ಕಳ್ಳರ ಕಣ್ಣು ಕುಕ್ಕಿರುವಂತಿದೆ. ಹಾಗಾಗಿ, ರೈತನೊಬ್ಬನ ಹೊಲದಲ್ಲಿದ್ದ ಸುಮಾರು 35-40 ಚೀಲ ಉಳ್ಳಾಗಡ್ಡಿಯನ್ನು ಯಾರೋ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.
ನೆರೆಗಲ್ ಪಟ್ಟಣದ ರೈತ ಗುರುಬಸಯ್ಯ ಕಳಕಯ್ಯ ಪ್ರಭುಸ್ವಾಮಿಮಠ ಎಂಬುವವರ ಹೊಲದಲ್ಲಿನ ಉಳ್ಳಾಗಡ್ಡಿಯನ್ನು ಕಳವು ಮಾಡಲಾಗಿದೆ. ದ್ಯಾಮವ್ವನ ಕೆರೆ ರಸ್ತೆಯಲ್ಲಿ 1.5 ಎಕರೆ ಜಮೀನಿನಲ್ಲಿ ಸುಮಾರು 50 ಸಾವಿರ ರೂ. ಖರ್ಚು ಮಾಡಿ ಈರುಳ್ಳಿ ಬೆಳೆ ಬಿತ್ತನೆ ಮಾಡಲಾಗಿತ್ತು. ಬೆಳೆಯೂ ಉತ್ತಮವಾಗಿ ಬಂದಿದ್ದರಿಂದ ರೈತ ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇದ್ದ. ಆದರೆ, ರಾತ್ರಿ ವೇಳೆ ಹೊಲಕ್ಕೆ ನುಗ್ಗಿದ ಖದೀಮರು ಉಳ್ಳಾಗಡ್ಡಿ ಹಾಗೂ ಸುಮಾರು 25 ಕೆಜಿಯಷ್ಟು ಮೆಣಸಿನಕಾಯಿ ಕಳವು ಮಾಡಿದ್ದರಿಂದ ರೈತ ಕಂಗಾಲಾಗಿದ್ದಾನೆ.