ಹುಬ್ಬಳ್ಳಿ: ಜಿಲ್ಲೆಯ ಸಂಚಾರಿ ಪೊಲೀಸ್ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದಾಗಿ 2 ನವಜಾತ ಹೆಣ್ಣು ಮಕ್ಕಳ ಜೀವ ಉಳಿದಿದೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಲಕ್ಷ್ಮಿ ಜನ್ಮನೀಡಿದ್ದರು, ಆದರೆ ಮಕ್ಕಳಲ್ಲಿ ತೀವ್ರತರದ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಜಿಲ್ಲಾಸ್ಪತ್ರೆಯ ವೈದ್ಯರ ಅಣತಿಯಂತೆ ಆದಷ್ಟು ಬೇಗ ನವಜಾತ ಶಿಶುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅರ್ಥಮಾಡಿಕೊಂಡ ಅಂಬ್ಯುಲೆನ್ಸ್ ಸಿಬ್ಬಂದಿ ಕೇವಲ 42 ನಿಮಿಷಗಳಲ್ಲಿ 80 ಕಿ ಮೀ ಕ್ರಮಿಸಿ ಮಕ್ಕಳನ್ನ ಕಿಮ್ಸ್ಗೆ ದಾಖಲಿಸಿದ್ದಾರೆ.
ಹುಬ್ಬಳ್ಳಿಯ ಹೊರವಲಯಕ್ಕೆ ಆಂಬ್ಯುಲೆನ್ಸ್ ಬರುತ್ತಿದ್ದಂತೆ ಜಿಲ್ಲೆಯ ಸಂಚಾರಿ ಪೊಲೀಸರು ಯಾವುದೇ ಟ್ರಾಫಿಕ್ ಸಮಸ್ಯೆ ಬರದಂತೆ ಕಿಮ್ಸ್ ವರೆಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಟ್ರಾಫಿಕ್ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಆಂಬ್ಯುಲೆನ್ಸ್ ಸಿಬ್ಬಂದಿ ತೌಫಿಕ್ ಪಠಾಣ್ ಮತ್ತು ಕುಮಾರ್ ಹಾಗೂ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.