ಹುಬ್ಬಳ್ಳಿ :ಬಸ್ ಕಂಡಕ್ಟರ್-ಡ್ರೈವರ್ನ ಮೂರ್ಚೆ ಬರುವಂತೆ ಮಾಡಿ ಕಳ್ಳತನ ಮಾಡುತ್ತಿದ್ದವನನ್ನು ಗ್ರಾಮಸ್ಥರು ಹಿಡಿದು ಮನಬಂದಂತೆ ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ.
ಗ್ರಾಮಸ್ಥರೇ ಕಳ್ಳರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಕುಂದಗೋಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ಹಲವು ದಿನಗಳಿಂದ ಕಂಡಕ್ಟರ್ಗಳಿಗೆ ತಮ್ಮ ಕೈಚಳಕ ತೋರಿಸಿ ಕಳ್ಳರು ಪರಾರಿಯಾಗುತ್ತಿದ್ದರು.ವಸ್ತಿ ಬಸ್ ನಿರ್ವಾಹಕರನ್ನು ಟಾರ್ಗೆಟ್ ಮಾಡಿ ಅವರನ್ನ ಆತ್ಮೀಯವಾಗಿ ಮಾತನಾಡಿಸಿ ಮೂರ್ಚೆ ಬರುವಂತೆ ಮಾಡಿ, ಅವರ ಬಳಿ ಇದ್ದ ಹಣವನ್ನೆಲ್ಲ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದರು. ಇಂತಹ ಹಲವು ಪ್ರಕರಣಗಳು ಕುಂದಗೋಳ ಠಾಣೆಯಲ್ಲಿ ದಾಖಲಾಗಿದ್ದವು.
ಗ್ರಾಮೀಣ ಬಸ್ ನಿರ್ವಾಹಕರು ವಸ್ತಿ ಬಸ್ ಡ್ಯೂಟಿ ಮಾಡಲು ಹಿಂದೇಟು ಹಾಕುತ್ತಿದ್ದರು. ಈ ಬಗ್ಗೆ ಗ್ರಾಮಸ್ಥರು ನಿಗಾವಹಿಸಿ ಹುಬ್ಬಳ್ಳಿ-ಚಾಕಲಬ್ಬಿ ಸಾರಿಗೆ ಬಸ್ ನಿರ್ವಾಹಕನ ಹಣ ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡ್ ಆಗಿ ಕಳ್ಳನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.