ಹುಬ್ಬಳ್ಳಿ: ಬಿಜೆಪಿ ಸರ್ಕಾರ ಯಾವ ಸಂದರ್ಭದಲ್ಲಾದರೂ ಬೀಳಬಹುದು. ಯಡಿಯೂರಪ್ಪ ಬಹಳ ದಿನ ಸಿಎಂ ಆಗಿ ಇರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಬಿಜೆಪಿ ಆಂತರಿಕ ಕಿತ್ತಾಟದ ಕುರಿತು ಮಾತನಾಡಿದ ಅವರು, ಶಾಸಕ ಯತ್ನಾಳ್ ಸಿಎಂ ಬದಲಾವಣೆ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ. ಶಿಸ್ತಿನ ಪಕ್ಷ ಅಂತಾ ಹೇಳ್ಕೊಳ್ಳೋ ಬಿಜೆಪಿಯವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ನೋಡಿದರೆ ಬಹಳಷ್ಟು ಬಿಜೆಪಿ ನಾಯಕರ ಬೆಂಬಲ ಯತ್ನಾಳ್ ಅವರಿಗಿದೆ ಎನ್ನುವುದು ಸ್ಪಷ್ಟಪಡಿಸುತ್ತಿದೆ ಎಂದರು.
ಪಕ್ಷದೊಳಗಿನ ಬೆಂಕಿ ಯಾವ ಸಂದರ್ಭದಲ್ಲಾದರೂ ಹೊತ್ತಿ ಉರಿಯಬಹುದು. ಯಾವುದೇ ಪಕ್ಷದ ಶಾಸಕರು ಮತ್ತೆ ಚುನಾವಣೆಗೆ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ.
ಹೀಗಾಗಿ ಬಿಜೆಪಿ ಸರ್ಕಾರ ಬಿದ್ದರೆ ಏನು ಬೇಕಾದರೂ ಬೆಳವಣಿಗೆ ಆಗಬಹುದು ಎಂದ ಅವರು, ಪರಿಷತ್ ಮತ್ತು ಉಪ ಚುನಾವಣೆ ಫಲಿತಾಂಶದ ನಂತರ ರಾಜಕೀಯ ಬದಲಾವಣೆಗಳು ಆಗಲಿವೆ ಎಂದು ಬಿಜೆಪಿ ವಿರುದ್ಧ ಹೊರಟ್ಟಿ ಟೀಕಾ ಪ್ರಹಾರ ಮಾಡಿದರು.