ಧಾರವಾಡ : ರಾಜ್ಯದಲ್ಲಿ ಹಿಂದೂ ಸಂಘಟಕರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಸಿಎಂ, ಗೃಹ ಮಂತ್ರಿ ಕ್ಷೇತ್ರದಲ್ಲಿ ಹಿಂದುಗಳ ಮೇಲೆ ಹಲ್ಲೆ ಹೆಚ್ಚಾಗಿವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರದಲ್ಲಿ ಮಾಲಾಧಾರಿಗಳ ಮೇಲೆ ದಾಳಿ ಆಯ್ತು, ಸ್ವಲ್ಪದರಲ್ಲಿಯೇ ಅದು ತಪ್ಪಿದೆ. ಇಲ್ಲದೇ ಹೋದಲ್ಲಿ ಮತ್ತೊಂದು ಗೋಧ್ರಾ ಆಗುತ್ತಿತ್ತು. ತೀರ್ಥಹಳ್ಳಿ ಘಟನೆಯೂ ಭಯಾನಕ, ವಾಹನ ಹಾಯಿಸುವ ಕುತಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಗೋ ರಕ್ಷಕನ ಮೇಲೆ ಹಲ್ಲೆ ನಡೆದಿದೆ. ನವನಗರದಲ್ಲಿ ಮತಾಂತರ ಯತ್ನ ನಡೆದಿತ್ತು. ಅದನ್ನು ತಡೆದು ಪ್ರತಿಭಟನೆ ಮಾಡಲಾಗಿತ್ತು. ಪ್ರತಿಭಟಿಸಿದ ನೂರು ಜನರ ಮೇಲೆ ಕೇಸ್ ದಾಖಲಿಸಲಾಗಿತ್ತು. ಕಾಂಗ್ರೆಸ್ ಈಗ ಏನಾದರು ಇದ್ದಿದ್ದರೇ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿತ್ತು.
ಬಿಜೆಪಿಯವರು ಹಿಂದುತ್ವದ ಆಧಾರದ ಮೇಲೆ ಗೆದ್ದವರು. ಆದರೆ, ಹಿಂದು ಕಾರ್ಯಕರ್ತರ ರಕ್ಷಣೆಯ ಪರಿಜ್ಞಾನ ಇಲ್ಲವಾ ಎಂದು ಪ್ರಶ್ನಿಸಿದರು. ಮುಸ್ಲಿಂ ಕಿಡಿಗೇಡಿಗಳನ್ನು ಸರ್ಕಾರ ಹದ್ದುಬಸ್ತಿನಲ್ಲಿಡಬೇಕು. ನಿಮಗೆ ಆಗದಿದ್ದಲ್ಲಿ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ನಮಗೆ ಗೊತ್ತು ಅವರನ್ನು ಹದ್ದುಬಸ್ತಿನಲ್ಲಿ ಇಡುವುದು. ನಾವು ಅವರಿಗೆ ಉತ್ತರ ಕೊಡುತ್ತೇವೆ. ಬಿಜೆಪಿ ಎಂಎಲ್ಎ, ಎಂಪಿಗಳ ಕ್ಷೇತ್ರಗಳಲ್ಲೆ ಮತಾಂತರ ನಡೀತಾ ಇದೆ.
ಅನೇಕ ಚರ್ಚ್ಗಳು, ಕಸಾಯಿಖಾನೆಗಳು ಹುಟ್ಟಿವೆ. ಗೋ ಕಳ್ಳತನದ ಮಾಹಿತಿ ಹಿಂದು ಸಂಘಟನೆಗಳಿಗೆ ಬರುತ್ತದೆ. ಆದರೆ, ಪೊಲೀಸರಿಗೆ ಇದು ಗೊತ್ತಾಗೋದಿಲ್ಲವಾ? ಪೊಲೀಸರೇನು ಕತ್ತೆ ಕಾಯತ್ತಾ ಇದಾರಾ? ಬಿಜೆಪಿ ಸರ್ಕಾರದಲ್ಲಿ ಗೋಕಳ್ಳತನ ಹೆಚ್ಚಾಗಿದೆ. ಮತಾಂತರ ಹೆಚ್ಚಾಗಿದೆ. ಇವರು ಕೇವಲ ಲೂಟಿ ಮಾಡುವುದರಲ್ಲಿ ಇದಾರೆ ಎಂದು ಆರೋಪಿಸಿದ್ದಾರೆ.
ಸಿಎಂ ಕ್ಷೇತ್ರದಲ್ಲೇ ರಾಕ್ಷಸರು, ದೇಶದ್ರೋಹಿಗಳು, ಮುಸ್ಲಿಂ ಕಿಡಿಗೇಡಿಗಳು ಬೆಳಿತಾ ಇದಾರೆ. ಇಲ್ಲದೇ ಹೋದಲ್ಲಿ ನಿಮ್ಮ ಕ್ಷೇತ್ರವೇ ಧೂಳಿಪಟ ಆಗುತ್ತಿದೆ. ಇದು ಮುಂದುವರೆದರೆ ಹಿಂದು ಸಮಾಜದವರು ಬದುಕೋದು ಕಷ್ಟವಾಗುತ್ತದೆ. ಇದನ್ನೆಲ್ಲ ಇವರೇ ಬೆಳೆಸುತ್ತಿದ್ದಾರೆ. ಇದು ನಾವು ಸರ್ಕಾರಕ್ಕೆ ಕೊಡುವ ಕೊನೆಯ ಎಚ್ಚರಿಕೆ.
ಚೆಕ್ಪೋಸ್ಟ್ಗಳಿದ್ದರೂ ಗೋ ಕಳ್ಳತನ ತಪಾಸಣೆ ಮಾಡುತ್ತಿಲ್ಲ. ಚೆಕ್ ಪೋಸ್ಟ್ನಲ್ಲಿ ಕೇವಲ ಹಣ ತಗೊಳ್ಳೋಕೆ ಅಲ್ಲ, ಚೆಕ್ ಪೋಸ್ಟ್ಗಳಲ್ಲಿ ತಪಾಸಣಾ ತಂಡ ರಚನೆ ಮಾಡಬೇಕು. ಇವರಿಗೆ ಆಗದೇ ಹೋದಲ್ಲಿ ನಾವು ತಪಾಸಣೆ ಮಾಡುತ್ತೇವೆ. ಪ್ರತಿ ಪಿಎಸ್ಐಗೆ ಗೃಹಮಂತ್ರಿಯೇ ಪತ್ರ ಬರಿಯಬೇಕು.
ಗೋಹತ್ಯೆ, ಮತಾಂತರಕ್ಕೆ ಪೊಲೀಸರೇ ಹೊಣೆ ಅಂತಾ ಎಚ್ಚರಿಸಬೇಕು. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಗೋ ರಕ್ಷಣಾ ಸಮಿತಿ ಮಾಡಬೇಕು ಎಂದು ಆಗ್ರಹಿಸಿದರು. ಗೋ ಹಂತಕರು ಕಸಾಯಿ ಖಾನೆ ಬೆಳೆಸಿದ್ದ ಕಾಂಗ್ರೆಸ್, ಅದನ್ನು ಈಗ ಬಿಜೆಪಿ ಮುಂದುವರಿಸುತ್ತಿದೆ.
50 ಸಾವಿರ ಕೋಟಿ ರೂ.ದಷ್ಟು ಪ್ರತಿ ವರ್ಷ ಗೋಮಾಂಸ ರಫ್ತು ಆಗುತ್ತಿದೆ. ಅದನ್ನು ಯಾಕೆ ಪ್ರಧಾನಿ ಮೋದಿ ಬಂದ್ ಮಾಡುತ್ತಿಲ್ಲ. ಮನಮೋಹನ ಸಿಂಗ್ ಸರ್ಕಾರ ಇದ್ದಾಗ ಮೋದಿಯವರೇ ಆರೋಪ ಮಾಡಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.