ಹುಬ್ಬಳ್ಳಿ: ಉದ್ಘಾಟನೆ ದಿನವೇ ಪುಟಾಣಿ ರೈಲೊಂದು ಹಳಿ ತಪ್ಪಿದ ಘಟನೆ ಇಂದಿರಾ ಗಾಂಧಿ ಗ್ಲಾಸ್ ಹೌಸ್ನಲ್ಲಿ ನಡೆದಿದೆ. ಕೇಂದ್ರ ಸಚಿವರ ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಉದ್ಘಾಟಿಸಿದ ಬಳಿಕ ಚಿಣ್ಣರ ಟ್ರೈನ್ ಹತ್ತಿದ್ದರು. ರೈಲು ಹತ್ತಿ ಕೊಂಚ ದೂರ ಚಲಿಸುತ್ತಿದಂತೆಯೇ ಹಳಿ ತಪ್ಪಿದೆ. ಆದರೆ, ಆಗಬಹುದಾಗಿದ್ದ ಅನಾಹುತ ತಪ್ಪಿದೆ.
ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ 4.2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ರೈಲು ಇದಾಗಿದೆ. ಹುಬ್ಬಳ್ಳಿಯ ಇಂದಿರಾ ಗಾಂಧಿ ಗಾಜಿನ ಮನೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ರೈಲಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಯೋಗಾತ್ಮಕವಾಗಿ ರೈಲು ಸವಾರಿ ನಡೆಸಿದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ಹಳಿ ತಪ್ಪಿದೆ.
ಉದ್ಘಾಟಿಸಿದ ಕೆಲವೇ ಮೀಟರ್ ದೂರ ಹೋದ ಬಳಿಕ ಹಳಿ ತಪ್ಪಿದರಿಂದ ಅಧಿಕಾರಿಗಳನ್ನು ಕೇಂದ್ರ ಸಚಿವ ಜೋಶಿ ತರಾಟೆಗೆ ತೆಗೆದುಕೊಂಡರು. ಇನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜಾರಿಗೊಳಿಸಿದ ಸ್ಮಾರ್ಟ್ ಸಿಟಿ ಯೋಜನೆ ಆರಂಭದಲ್ಲಿಯೇ ಮುಗ್ಗರಿಸಿದ್ದು, ಸಾರ್ವಜನಿಕರ ನಗೆಪಾಟಲಿಗೆ ಗುರಿಯಾಗಿದೆ.