ಹುಬ್ಬಳ್ಳಿ: ಅತಿವೃಷ್ಟಿ,ಅನಾವೃಷ್ಟಿ, ಜಲಪ್ರಳಯ ಅಲ್ಲದೆ ಕೊರೊನಾ ಮಹಾಮಾರಿಯಂತಹ ರೋಗಗಳು ಈಗಾಗಲೇ ಸಾಕಷ್ಟು ಭಯ ಹುಟ್ಟಿಸಿದ್ದು, ಈಗ ಹುಬ್ಬಳ್ಳಿ ಮತ್ತು ಬೆಂಗಳೂರಿಗರಿಗೆ ಮತ್ತೊಂದು ಆತಂಕ ಏದುರಾಗುವ ಸಾಧ್ಯತೆ ಇದೆ. ಇದರಿಂದ ಜೀವಸಂಕುಲ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.
ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳು 2050ರ ವೇಳೆಗೆ ‘ಜಲಕಂಟಕ’ಕ್ಕೆ ಒಳಗಾಗುವ ಅಪಾಯವಿದೆ. ಹವಾಮಾನ ವೈಪರೀತ್ಯ ಕಡಿಮೆ ಮಾಡುವ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳದೇ ಇದ್ದಲ್ಲಿ, 2050ರ ವೇಳೆಗೆ ಅತೀ ಹೆಚ್ಚು ನೀರಿನ ಕಂಟಕ (ರಿಸ್ಕ್ ಆಫ್ ವಾಟರ್) ಎದುರಿಸುವ ವಿಶ್ವದ 100 ನಗರಗಳ ಪಟ್ಟಿಯಲ್ಲಿ ಹು-ಧಾ ಹಾಗೂ ಬೆಂಗಳೂರು ಸೇರಿದೆ ಎಂದು ವರದಿಯೊಂದು ಹೇಳಿದೆ.
ವರ್ಲ್ಡ್ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ಈ ವರದಿಯನ್ನು ನೀಡಿದ್ದು, ವಿಶ್ವದ 100 ನಗರಗಳ ಪಟ್ಟಿಯಲ್ಲಿ ಭಾರತದ 30 ನಗರಗಳು ಈ ಜಲಕಂಟಕಕ್ಕೆ ಒಳಗಾಗಲಿದೆ ಎಂದು ಉಲ್ಲೇಖಿಸಿದೆ. ಭಾರತದ 30 ನಗರ ಪೈಕಿ, ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಕೂಡ ಸೇರಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಡಬ್ಲ್ಯುಡಬ್ಲ್ಯುಎಫ್ನ ಜಲಕಂಟಕ ವಿಶ್ಲೇಷಣೆಯ ಪ್ರಕಾರ ನೀರಿನ ಸಂಕಷ್ಟ ಎದುರಿಸಲಿರುವ ಭಾರತದ ನಗರಗಳಲ್ಲಿ ರಾಜಸ್ಥಾನದ ಜೈಪುರ ಮೊದಲ ಸ್ಥಾನದಲ್ಲಿದೆ. ಕೇರಳದ ಕಣ್ಣೂರು ಕೊನೆಯ ಸ್ಥಾನದಲ್ಲಿದೆ.
ಬೆಂಗಳೂರು10 ಮತ್ತು ಹುಬ್ಬಳಿ-ಧಾರವಾಡ 16ನೇ ಸ್ಥಾನದಲ್ಲಿದೆ. 2050ರ ವೇಳೆಗೆ ನೀರಿನ ಸಮಸ್ಯೆಗೆ ಒಳಗಾಗುವ ಅಪಾಯ ಇರುವ ವಿಶ್ವದ ನೂರು ನಗರಗಳಲ್ಲಿ ಈಜಿಪ್ಟ್ನ ಅಲೆಕ್ಸಾಂಡ್ರಿಯ ಮೊದಲ ಸ್ಥಾನದಲ್ಲಿದೆ. ಚೀನಾದ 30 ನಗರಗಳು ಈ ಪಟ್ಟಿಯಲ್ಲಿ ಇವೆ.
ಜಕಾರ್ತಾ, ಜೊಹಾನ್ಸ್ಬರ್ಗ್, ಇಸ್ತಾಂಬುಲ್, ಹಾಂಗ್ ಕಾಂಗ್, ಮೆಕ್ಕಾ, ರಿಯೊ-ಡಿ-ಜನೈರೊ ಮೊದಲಾದ ನಗರಗಳು ಸಹ ಈ ಪಟ್ಟಿಯಲ್ಲಿ ಸೇರಿವೆ. ಈ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೆ, ಈ ನಗರಗಳು 2050ರ ವೇಳೆಗೆ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸಲಿವೆ ಎಂದು ವಿಶ್ಲೇಷಣಾ ವರದಿಯಲ್ಲಿ ವಿವರಿಸಲಾಗಿದೆ.