ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ಜ.18ರಂದು ನಡೆಯಲಿರುವ ಪೌರತ್ವ(ತಿದ್ದುಪಡಿ) ಕಾಯ್ದೆ ಜಾಗೃತಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.
ಈಗಾಗಲೇ ವೇದಿಕೆ ಕಾರ್ಯ ಪ್ರಗತಿಯಲ್ಲಿದ್ದು, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಕೆಲಸ ಕೂಡ ಜೋರಾಗಿ ಸಾಗಿದೆ. ಮೈದಾನದ ಸುತ್ತ ಭದ್ರತೆ ಕೈಗೊಳ್ಳಲು ಕೇಂದ್ರ ಭದ್ರತಾ ತಂಡ ಪರಿಶೀಲನೆ ನಡೆಸಿದೆ.
ಬೆಳಗಾವಿ, ಬಳ್ಳಾರಿ, ಮೈಸೂರು ಮತ್ತು ದಾವಣಗೆರೆ ವಲಯಗಳಿಂದ ಪೊಲೀಸ್ ಸಿಬ್ಬಂದಿ ಇಂದು ಸಂಜೆಯೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಭದ್ರತೆಗೆ ನಾಲ್ವರು ಪೊಲೀಸ್ ವರಿಷ್ಠಾಧಿಕಾರಿಗಳು, 10 ಡಿಸಿಪಿ, 42 ಇನ್ಸ್ಪೆಕ್ಟರ್,65 ಪೊಲೀಸ್ ಸಬ್ ಇನ್ಸ್ಪೆಕ್ಟರ್, 120 ಎಎಸ್ಐ, 860 ಪೇದೆಗಳು ನಿಯೋಜನೆಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಿದ್ದಾರೆ.