ಹುಬ್ಬಳ್ಳಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ನೌಕರರ ಮೇಲಿದ್ದ 5,966 ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಹಲವು ವರ್ಷಗಳಿಂದ ಬಾಕಿ ಉಳಿಸಿದ್ದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ನೌಕರರನ್ನು ನಿರಾಳಗೊಳಿಸಿದೆ.
ಸಂಸ್ಥೆಯ 9 ವಿಭಾಗಗಳು, 51 ಘಟಕಗಳು, ಪ್ರಾದೇಶಿಕ ತರಬೇತಿ ಕೇಂದ್ರ ಹಾಗೂ ಪ್ರಾದೇಶಿಕ ಕಾರ್ಯಾಗಾರದಲ್ಲಿ ತರಬೇತಿ/ ಪರೀಕ್ಷಾರ್ಥಿ ಹಾಗೂ ಕಾಯಂ ಆಗಿ ಕೆಲಸ ಮಾಡುತ್ತಿರುವ ಚಾಲಕರು, ಚಾಲಕರು/ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ವಿರುದ್ಧ ಒಟ್ಟು 6,858 ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದವು. ಈ ಪೈಕಿ ಕೆಲವು, ಇಲಾಖೆ ಮತ್ತು ಕೋರ್ಟ್ ವಿಚಾರಣೆ ಹಂತದಲ್ಲಿಯೂ ಇದ್ದವು.
ಇವುಗಳಲ್ಲಿ ಅತ್ಯಂತ ಗಂಭೀರವಲ್ಲದ,ಸಣ್ಣಪುಟ್ಟ ಪ್ರಕರಣಗಳನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಅವರು, ತಾವು ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿಯೇ ಇತ್ಯರ್ಥಗೊಳಿಸಿದ್ದಾರೆ. ಅದರಂತೆ, ನಿಗದಿತ ಕಾಲಮಿತಿಯಲ್ಲಿ ಇತರ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಕಾರ್ಯ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ.
ಈ ಮೂಲಕ ನೌಕರರು ಯಾವುದೇ ಕಿರಿಕಿರಿ ಇಲ್ಲದೆ ಕೆಲಸ ಮಾಡುವಂತಾಗಬೇಕು. ಎಲ್ಲ ತಪ್ಪುಗಳು ಉದ್ದೇಶಪೂರ್ವಕವಾಗಿ ಆಗಿರುವುದಿಲ್ಲ. ಆ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಯಿತು. ಒಟ್ಟು ಪ್ರಕರಣಗಳ ಪೈಕಿ, 2,778 ಶಿಸ್ತು ಮತ್ತು 4,080 ಗೈರು ಹಾಜರಾತಿ ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ತಿಳಿಸಿದ್ದಾರೆ.
ಓದಿ :ರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯ: ವೀಲ್ ಚೇರ್ನಲ್ಲಿ ಆಗಮಿಸಿದ ಮಾಜಿ ಪ್ರಧಾನಿ ಹೆಚ್ಡಿಡಿ