ಹುಬ್ಬಳ್ಳಿ: ಹುಬ್ಬಳ್ಳಿ ಕೋರ್ಟ್ ಸರ್ಕಲ್ ಹತ್ತಿರ ಇರುವ ಸಾಯಿ ಮಂದಿರದಲ್ಲಿ ಕೆಲವು ಆಡಳಿತ ಮಂಡಳಿಯವರು ಅನಧಿಕೃತವಾಗಿ ಆಡಳಿತ ನಡೆಸುವ ಮೂಲಕ ಕಾನೂನಿನ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಅಲ್ಲದೇ ಸಾಯಿಬಾಬಾ ಮಂದಿರದ ಬೈಲಾ ಉಲ್ಲಂಘಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದು, ಅವರನ್ನು ಕೂಡಲೇ ತೆಗೆದುಹಾಕಬೇಕು ಎಂದು ಅನಿಲ್ ಕುಮಾರ ಮಿಸ್ಕಿನ್ ಹಾಗೂ ನಿರಂಜನ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಅಧ್ಯಕ್ಷರಾದ ಡಾ.ಮೋಹನಕುಮಾರ, ಉಪಾಧ್ಯಕ್ಷರಾದ ಮಹಾದೇವ ಮಾಶ್ಯಾಳ ಹಾಗೂ ಕಾರ್ಯದರ್ಶಿಗಳಾದ ವೆಂಕಟರಾವ್ ಕುಲಕರ್ಣಿ ಎಂಬುವವರು ಅನಧಿಕೃತವಾಗಿ ಅಧಿಕಾರ ನಡೆಸುತ್ತಿದ್ದು, ಆಡಳಿತ ಮಂಡಳಿ ಕಲಂ 13ರ ಪ್ರಕಾರ ಕರ್ನಾಟಕ ಸಂಘಗಳ ಕಾನೂನು ಕಾಯ್ದೆ 1960ರ ಅನ್ವಯ ನೋಂದಣಿಯಾಗಿಲ್ಲ. ಅಲ್ಲದೇ ಯಾವುದೇ ಕಾನೂನಿನ ಅಸ್ತಿತ್ವ ಇರುವುದಿಲ್ಲ ಎಂದರು.
ಜಿಲ್ಲಾ ನ್ಯಾಯಾಲಯವು ಆಡಳಿತದಲ್ಲಿ ಯತಾಸ್ಥಿತಿ ಕಾಯ್ದುಕೊಳ್ಳಬೇಕೆಂದು ತಡೆಯಾಜ್ಞೆ ನೀಡಿತ್ತು. ಆದರೂ ನ್ಯಾಯಾಲಯದ ಅಪ್ಪಣೆ ಇಲ್ಲದೇ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ದೂರಿದರು.
ಸಾಯಿಮಂದಿರ ಸಾರ್ವಜನಿಕ ಆಸ್ತಿಯಾಗಿದ್ದು, ಈ ಅನಧಿಕೃತ ಆಡಳಿತ ಮಂಡಳಿಯ ದುರ್ನಡತೆಯಿಂದ ಅವ್ಯವಸ್ಥೆಯಿಂದ ಕೂಡಿದಂತಾಗಿದೆ. ಈ ಕೂಡಲೇ ಅನಧಿಕೃತವಾಗಿ ಆಡಳಿತ ನಡೆಸುತ್ತಿರುವವರು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.