ಹುಬ್ಬಳ್ಳಿ: ಸ್ಮಾರ್ಟ್ಸಿಟಿ ಯೋಜನೆಯಡಿ ಉಣಕಲ್ ಕೆರೆಯನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಉಣಕಲ್ ಅಭಿವೃದ್ಧಿ ಸಂಘ, ದೇಶಪಾಂಡೆ ಫೌಂಡೇಷನ್, ಟಾಟಾ ಹಿಟಾಚಿ ಸಹಯೋಗದಲ್ಲಿ ಕೈಗೊಳ್ಳಲಾಗಿರುವ ಉಣಕಲ್ ಕೆರೆಯ ಅಂತರಗಂಗೆ ಕಳೆ ಶುದ್ಧೀಕರಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಉಣಕಲ್ ಕೆರೆ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯು ನವೆಂಬರ್ 18 ರಂದು ಸಭೆ ನೆಡೆಸಿ ಕೆರೆ ಶಾಶ್ವತ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಯೋಜನೆಯನ್ನು ರೂಪಿಸಲಿದೆ. ನಾಗರಿಕರು ಸಹ ತಮ್ಮ ಸಲಹೆಗಳನ್ನು ಸಮಿತಿಗೆ ನೀಡಬಹುದು. ಉಣಕಲ್ ಅಭಿವೃದ್ಧಿ ಸಂಘದ ಯುವಕರ ಕಾರ್ಯ ಶ್ಲಾಘನೀಯ. ಕೆರೆಯಲ್ಲಿ ಬೆಳೆಯುವ ಅಂತರಗಂಗೆ ಕಳೆ ಪ್ರತಿವರ್ಷವೂ ಮರುಕಳಿಸುತ್ತದೆ. ಇದಕ್ಕೆ ಕಾರಣ ಕೆರೆಗೆ ಸೇರುವ ನಗರದ ಕೊಳಚೆ ನೀರು. ಈಗಾಗಲೇ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡಲು ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಘಟಕವು ಸಂಪೂರ್ಣವಾಗಿ ಕಾರ್ಯಾರಂಭ ಮಾಡುತ್ತದೆ. ಕೆರೆಯ ಮಧ್ಯದ ಪ್ರತಿಮೆ ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಯುವಕರು ನಡೆಸಿದ ಕಳೆ ತೆಗೆಯುವ ಕಾರ್ಯವನ್ನು ಸ್ವತಃ ವೀಕ್ಷಿಸಿದ ಸಚಿವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಉಣಕಲ್ ಕೆರೆಯ ಸುತ್ತಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಅವರು ಮಹಾಮಳೆಗೆ ಕೊಚ್ಚಿಹೋದ ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಎರಡು ತಿಂಗಳ ಒಳಗಾಗಿ ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ದೇಶಪಾಂಡೆ ಫೌಂಡೇಷನ್ನ ವಿವೇಕ್ ಪವಾರ್, ಟಾಟಾ ಹಿಟಾಚಿ ಪ್ರಸನ್ನ ದೀಕ್ಷಿತ್, ಅಜಿತ್ ಕುಲಕರ್ಣಿ, ಉಣಕಲ್ ಅಭಿವೃದ್ಧಿ ಸಂಘದ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.