ಹುಬ್ಬಳ್ಳಿ: ಒಳ ಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿಯಲ್ಲಿ ಕಾರ್ಮಿಕನೋರ್ವ ಸಿಲುಕಿದ ಘಟನೆ ಹುಬ್ಬಳ್ಳಿಯ ಬೈಲಪ್ಪನವರ ನಗರದಲ್ಲಿ ನಡೆದಿದೆ.
ಯಲ್ಲಪ್ಪ ಮಣ್ಣಿನಲ್ಲಿ ಸಿಲುಕಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ ಕಾರ್ಮಿಕ. ಇಂದು ಬೆಳಗ್ಗೆ ಒಳಚರಂಡಿ ಕಾಮಗಾರಿ ಹಿನ್ನೆಲೆ ತೆರೆದ ಒಳಚರಂಡಿಗೆ ಇಳಿದಿದ್ದ. ಆಗ ಮೇಲಿಂದ ಮಣ್ಣು ಕುಸಿದು ಈತನ ಮೇಲೆ ಬಿದ್ದಿದೆ. ಕೂಡಲೇ ಸ್ಥಳೀಯರು ಆತನ ರಕ್ಷಣೆಗೆ ಧಾವಿಸಿದ್ದಾರೆ. ಆದ್ರೆ ಮಣ್ಣು ಮೇಲೆ ಬಿದ್ದ ಪರಿಣಾಮ ಮೇಲೆ ಎತ್ತಲು ಸಾಧ್ಯವಾಗದಿದ್ದಾಗ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಆತನನ್ನು ಮೇಲೆತ್ತಿ ರಕ್ಷಿಸಿ ಕಿಮ್ಸ್ಗೆ ದಾಖಲಿಸಿದ್ದಾರೆ.
ನಾಗೇಶ ಹಂಚಿನಮನಿ ಎಂಬಾತ ಈ ಕಾಮಗಾರಿ ಗುತ್ತಿಗೆ ಪಡೆದಿದ್ದ ಎನ್ನಲಾಗಿದ್ದು, ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.