ಹುಬ್ಬಳ್ಳಿ: 'ನಾವು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬಂದಾಗ ಆ ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಹಿರಿಯರಾದ ಎಚ್. ವಿಶ್ವನಾಥ್ ಅನಗತ್ಯವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡಬಾರದು' ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ವಿಶ್ವನಾಥ್ ಯಾವ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಕುರಿತು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಬಿಜೆಪಿ ಸೇರಿದ ಮೇಲೆ ಅವರು ಪಕ್ಷದ ನಿಲುವಿಗೆ ಬದ್ಧರಾಗಿರಬೇಕು. ಪಕ್ಷದ ಸಿದ್ಧಾಂತಕ್ಕೆ ಹೊಂದಿಕೊಳ್ಳಬೇಕು. ಗುರುವಾರ ಅವರಿಗೆ ಕರೆ ಮಾಡಿದರೆ, ಸಿಗಲಿಲ್ಲ. ಯಾರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು' ಎಂದರು.
ಇದೇ ವೇಳೆ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯು ಕೇವಲ ಕಾರ್ಮಿಕ ಕಾರ್ಡ್ ಇದ್ದವರಿಗೆ ಮಾತ್ರ ಚಿಕಿತ್ಸೆ ಎನ್ನುವ ಮನಸ್ಥಿತಿಯನ್ನು ಕೈಬಿಡಬೇಕು ಎಂದರು. ಕಾರ್ಮಿಕ ಕಾರ್ಡ್ ರಹಿತ ಸಾರ್ವಜನಿಕರಿಗೂ ಕೂಡ ಔಷಧ ನೀಡಬೇಕು ಎಂದು ವೈದ್ಯಕೀಯ ಸಿಬ್ಬಂದಿಗೆ ಸೂಚಿಸಿದರು.
ವರ್ಷಕ್ಕೆ 500 ಕೋಟಿ ರೂ. ಔಷಧಕ್ಕೆ ಸರ್ಕಾರ ಖರ್ಚು ಮಾಡುತ್ತಿದೆ. ಆದರೆ 1:4 ಔಷಧ ಕೂಡ ಖರ್ಚಾಗುತ್ತಿಲ್ಲ. ಇಂತಹ ಮನಸ್ಥಿತಿಯನ್ನು ಕೈಬಿಡಬೇಕು, ಎಲ್ಲರಿಗೂ ಅವಶ್ಯಕತೆಗೆ ಅನುಗುಣವಾಗಿ ಔಷಧ ಒದಗಿಸುವ ಕಾರ್ಯಮಾಡಬೇಕು ಎಂದರು.