ಹುಬ್ಬಳ್ಳಿ : ಹಿಂದುಳಿದ ಕುರುಬ ಜನಾಂಗದವರು ಭಾರತದ ಮೂಲ ನಿವಾಸಿಗಳು. ಅವರನ್ನು ಪರಿಶಿಷ್ಟ ಪಂಗಡ, ಬುಡಕಟ್ಟು, ಅಲೆಮಾರಿ ಜನಾಂಗಕ್ಕೆ ಸೇರಿಸಬೇಕೆಂದು ಧಾರವಾಡದ ಮನಸೂರಿನ ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು ಒತ್ತಾಯಿಸಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆಯೇ ಕುಲಶಾಸ್ತ್ರೀಯ ಅಧ್ಯಯನ ಮಾಡಲಾಗಿದೆ. ಕುರುಬ ಜನಾಂಗ ಎಸ್ಟಿ ಪಂಗಡಕ್ಕೆ ಸೇರಿದೆ ಅಂತಾ ಆ ಅಧ್ಯಯನದ ವರದಿ ಸಾಬೀತು ಮಾಡಿದೆ. ರಾಜ್ಯದಲ್ಲಿ ಕುರುಬರನ್ನು, ಕಾಡುಕುರುಬ, ಜೇನುಕುರುಬ, ಗೊಂಡ, ರಾಜಗೊಂಡ, ಹಾಲುಮತ ಎಂದು ಕರೆಯುವ ಇವರನ್ನು ಧರಸ್ಟನ್ ಮತ್ತು ಬ್ರಿಟಿಷ್ ಸರ್ಕಾರ 1868 ರ ಜನಗಣತಿ ವರದಿ ಶಿಫಾರಸ್ಸಿನ ಅನ್ವಯ ವರದಿ ಸಿದ್ದಪಡಿಸಿ 1961 ರಲ್ಲಿ ಭಾರತ ಎಸ್.ಸಿ-ಎಸ್.ಟಿ ಆಯೋಗ ಸದಸ್ಯ ಎ.ಎ.ಲೋಯಿಜ್ ಕುರುಬರಿಗೆ ಎಸ್ಟಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದಾರೆ.
ಅಷ್ಟೇ ಅಲ್ಲದೇ ಆಯಾಕಾಲದಲ್ಲಿ ಚರ್ಚೆ, ಆದೇಶ, ಶಿಫಾರಸು ಮಾಡಿದ ಉಲ್ಲೇಖಗಳಿವೆ. ಈ ಬಗ್ಗೆ ಬಿ.ಆರ್.ಅಂಬೇಡ್ಕರ್ ಸಹಿತ ಅವರೇ ರೂಪಿಸಿದ ಸಂವಿಧಾನದಲ್ಲಿ ಎಸ್ಟಿ ಅಧಿನಿಯಮದಲ್ಲಿ ಕರ್ನಾಟಕ ಕಾಡುಕುರುಬ, ಜೇನುಕುರುಬ, ಗೊಂಡ, ರಾಜಗೊಂಡ, ಕುರುಬ, ಎಸ್ಟಿ ಪಟ್ಟಿಯಲ್ಲಿದ್ದು, ಕೊಡಗಿನಲ್ಲಿ ಕುರುಬರಿಗೆ ಎಸ್ಟಿಗೆ ಸೇರಿಸಲಾಗಿದೆ.
ಆದರೆ, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಎಸ್ಟಿ ಮೀಸಲಾತಿ ನೀಡದಿರುವುದನ್ನು ಮನಗಂಡು ಹಲವು ವರ್ಷಗಳಿಂದ ಕುರುಬ ಬಲ ಶಾಸ್ತ್ರೀಯ ಅಧ್ಯಯನ ಮಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಭೌಗೋಳಿಕ ವರದಿ ಸಿದ್ದಪಡಿಸಿ, ಕಾನೂನು ಹೋರಾಟ, ಬಹಿರಂಗ ಚರ್ಚೆ, ರಾಜ್ಯಮಟ್ಟದ ಹೋರಾಟ ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ಪಂದಿಸಿ ರಾಜ್ಯಕ್ಕೆ ನಿರ್ದೇಶನ ನೀಡಿತ್ತು.
ಆ ನಿರ್ದೇಶನದ ಅನ್ವಯ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಿ ಕುರುಬ ಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ನೀಡಿದೆ. ಇದನ್ನು ಕುರುಬ ಸಮಾಜ ಸ್ವಾಗತಿಸಿದೆ. ಈ ಅಧ್ಯಯನಕ್ಕೆ ಅನುಕೂಲವಾಗುವಂತೆ ದುಂಡು ಮೇಜಿನ ಸಭೆಯನ್ನೂ ಕರೆಯಲಾಗುತ್ತಿದ್ದು, ಇದರಲ್ಲಿ ಕುರುಬ ಸಮಾಜದ ಸಾಹಿತಿಗಳು, ಸಂಶೋಧಕರನ್ನು ಕರೆಸಿ ಚರ್ಚಿಸಿ ಮತ್ತಷ್ಟು ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಮೂಲಕ ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯ ಮಾಡಲಾಗುವುದು ಎಂದರು.