ಹುಬ್ಬಳ್ಳಿ: ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಬೇಕೇ ಹೊರತು, ನಿಖಿಲ್ ಕುಮಾರಸ್ವಾಮಿಯವರ ತಂದೆಯಾಗಿ ಕೆಲಸ ಮಾಡಬಾರದು ಎಂದು ರಾಜ್ಯ ಬಿಜೆಪಿ ನಾಯಕಿ, ನಟಿ ಮಾಳವಿಕಾ ಅವಿನಾಶ್ ಸಿಎಂ ಅವರನ್ನ ಎಚ್ಚರಿಸಿದ್ದಾರೆ
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಚುನಾವಣೆಯಲ್ಲಿ ರಾಜಕೀಯ ಸಂಭಾಷಣೆ ಮೌಲ್ಯ ಕುಸಿದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಸ್ಪರ್ಧೆ ಮಾಡುವ ಹಕ್ಕಿದೆ. ಸುಮಲತಾ ಅವರನ್ನು ನೈತಿಕವಾಗಿ ಕುಗ್ಗಿಸುವ ಯತ್ನ ನಡೆಯುತ್ತಿದೆ. ಅಭ್ಯರ್ಥಿಗಳ ನಡುವೆ ವೈಯಕ್ತಿಕ ಟೀಕೆಗಳು ಸರಿಯಲ್ಲ ಎಂದರು.
ಹಾಲಿ ಸಂಸದ ಪ್ರಹ್ಲಾದ್ ಜೋಶಿ ಅವರು ಹತ್ತು ಹಲವು ಕಾರ್ಯಗಳನ್ನು ಅವಳಿ ನಗರಕ್ಕೆ ನೀಡಿದ್ದಾರೆ. ಜೋಶಿಯವರ ವಿರುದ್ಧ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಪಕ್ಷದ ವಿನಯ ಕುಲಕರ್ಣಿ ವಿರುದ್ಧ ಕೊಲೆ ಆರೋಪ ಬಂದಿದೆ. ಬಿಜೆಪಿ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಕೊಲೆ ನಡೆದಿತ್ತು. ಅದೇ ಕೊಲೆಗೆ ಸಂಬಂಧಪಟ್ಟಂತೆ ಕೆಲವು ಸಾಕ್ಷಿಗಳನ್ನು ನಾಶ ಮಾಡಿದ್ದಾರೆ ಎಂಬ ಆರೋಪ ಈಗಿನ ಧಾರವಾಡ ಲೋಕಸಭಾ ಕೈ ಅಭ್ಯರ್ಥಿ ಮೇಲೆ ಕೇಳಿ ಬಂದಿದೆ. ಧಾರವಾಡ ನ್ಯಾಯಾಲಯ ಈ ಕುರಿತು ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಆದೇಶ ಮಾಡಿದೆ. ತಮ್ಮ ಅಭ್ಯರ್ಥಿಯ ಪೂರ್ವಾಪರ ತಿಳಿಯದೇ ಹೇಗೆ ಟಿಕೆಟ್ ನೀಡಿದರು ಎಂಬ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಸವಾಲು ಹಾಕಿದರು.
ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ಮೋದಿ ಹಾಗೂ ಪ್ರಹ್ಲಾದ್ ಜೋಶಿ ಪರ ಪ್ರಚಾರ ಮಾಡುವುದಕ್ಕೆ ನನಗೆ ಹೆಮ್ಮೆ ಅನ್ನಿಸುತ್ತೆ. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಲು ನಾವು ಈಗ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಕಳೆದ ಎರಡು ದಿನಗಳ ಹಿಂದೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅವರದ್ದು ಘೋಷಣಾ ಪತ್ರ, ನಮ್ಮದೂ ಸಂಕಲ್ಪ ಪತ್ರವಾಗಿದೆ ಎಂದರು.
ಇದಕ್ಕೂ ಮುನ್ನ ಸಂಸದ ಪ್ರಹ್ಲಾದ್ ಜೋಶಿ ಪರವಾಗಿ ನಟಿ ಮಾಳವಿಕಾ ಅವಿನಾಶ್ ಭರ್ಜರಿ ಪ್ರಚಾರ ನಡೆಸಿದರು. ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಪ್ರಚಾರಲ್ಲಿ ಪಾಲ್ಗೊಂಡಿದ್ದರು.