ಹುಬ್ಬಳ್ಳಿ: ಕೊರೊನಾ ಹಾವಳಿ ಜಗತ್ತನ್ನೇ ತಲ್ಲಣಗೊಳಿಸಿದೆ. ಆಸ್ಪತ್ರೆಗಳೆಲ್ಲವೂ ಕಾರ್ಯ ನಿರ್ವಹಿಸುವಲ್ಲಿ ಬ್ಯುಸಿಯಾಗಿವೆ. ಅಲ್ಲದೇ ಆ್ಯಂಬುಲೆನ್ಸ್ ಕೂಡ ಒತ್ತಡದಲ್ಲಿಯೇ ಕೆಲಸ ನಿರ್ವಹಿಸುತ್ತಿವೆ. ಇದೆಲ್ಲದರ ಮಧ್ಯದಲ್ಲಿ ಇಲ್ಲೊಬ್ಬ ವ್ಯಕ್ತಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ.
ಹೌದು.. ಹುಬ್ಬಳ್ಳಿಯ ಇರ್ಷಾದ್ ಬಲ್ಲಾಶೆಟ್ ಎಂಬುವ ವ್ಯಕ್ತಿ ಸ್ವಯಂ ಆ್ಯಂಬುಲೆನ್ಸ್ ವಾಹನವನ್ನು ಉಚಿತವಾಗಿ ಸಾರ್ವಜನಿಕ ಸೇವೆಗೆ ನೀಡಿದ್ದಾರೆ. ಸ್ವತಃ ತಾನೇ ಚಾಲನೆ ಮಾಡುವ ಮೂಲಕ ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು, ಕೊರೊನಾದಿಂದ ಮೃತಪಟ್ಟಿರುವ ಮೃತ ದೇಹಗಳನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವುದು ಮಾತ್ರವಲ್ಲದೇ ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗೂ ಕೂಡ ಉಚಿತವಾಗಿ ಆ್ಯಂಬುಲೆನ್ಸ್ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಹುಬ್ಬಳ್ಳಿಯ ಗಣೇಶ ಪೇಟೆಯ ನಿವಾಸಿಯಾಗಿರುವ ಇರ್ಷಾದ್ ಬಲ್ಲಾಶೇಠ್ಗೆ ಯಾರಾದರೂ ಕರೆ ಮಾಡಿ ಸಹಾಯ ಕೇಳಿದರೆ ಸಾಕು ಕೆಲವೇ ಕ್ಷಣದಲ್ಲಿ ಆ್ಯಂಬುಲೆನ್ಸ್ ಮೂಲಕ ಸಾರ್ವಜನಿಕರ ಸೇವೆಗೆ ಮುಂದಾಗುತ್ತಿದ್ದಾರೆ. ಹುಬ್ಬಳ್ಳಿ ಯಾವುದೇ ಆಸ್ಪತ್ರೆಯಿಂದ ಕರೆ ಮಾಡಿದರೂ ಇರ್ಷಾದ್ ಸಾರ್ವಜನಿಕ ಸೇವೆಗೆ ಬರುತ್ತಾರೆ. ಅಲ್ಲದೇ ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ಜಾತಿ ಧರ್ಮ ಭೇದ ಭಾವ ಮರೆತು ಯಾರೇ ಸಹಾಯಕ್ಕೆ ಕರೆದರೂ ಹೋಗುವುದು ಇವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ.

ಒಟ್ಟಿನಲ್ಲಿ ಇರ್ಷಾದ್ ಅವರ ಕಾರ್ಯ ಇನ್ನೂ ಹೆಚ್ಚು ವ್ಯಾಪಿಸಲಿ. ಹೆಚ್ಚಿನ ಸೇವೆ ಮಾಡಲು ದೇವರು ಶಕ್ತಿ ನೀಡಲಿ ಎಂಬುವುದು ನಮ್ಮ ಆಶಯ.
ಓದಿ: ಕನ್ನಡಿಗ, ಕೆಕೆಆರ್ ಪ್ಲೇಯರ್ ಪ್ರಸಿದ್ಧ್ ಕೃಷ್ಣಗೆ ಕೊರೊನಾ ದೃಢ