ಹುಬ್ಬಳ್ಳಿ: ಮಂಡ್ಯ ಲೋಕಸಭೆ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಇದರ ನಡುವೆ ಇವರಿಬ್ಬರಲ್ಲಿ ಯಾರಿಗೆ ಸೋಲು, ಯಾರಿಗೆ ಗೆಲುವು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಜಿಜ್ಞಾಸೆ ಶುರುವಾಗಿದ್ದು, ಕೆಲವರು ದೈವದ ಮೊರೆ ಹೋಗಿದ್ದಾರೆ.
ಹೌದು, ಮಂಡ್ಯದಲ್ಲಿ ಸುಮಲತಾ ಗೆಲ್ಲುತ್ತಾರೋ ಅಥವಾ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೋ ಎಂದು ಮಹಿಳೆಯೊಬ್ಬರು ಜೋಗಮ್ಮನ ಮೂಲಕ ಯಲ್ಲಮ್ಮ ದೇವಿ ತುಂಬಿದ ಕೊಡದ ಭವಿಷ್ಯ ಕೇಳಿದ್ದಾರೆ. ಇದೀಗ ಅದು ಸಖತ್ ವೈರಲ್ ಆಗಿದೆ. ಯಲ್ಲಮ್ಮ ದೇವಿ ಸುಮಲತಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ತೋರಿಸಿದ್ದಾಳೆ. ಇನ್ನು ದೇವೇಗೌಡ ಸೇರಿದಂತೆ ಅವರ ಕುಟುಂಬದ ಯಾರೂ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ ಎಂದು ಭವಿಷ್ಯ ನುಡಿದಿದೆ.
ಅದರ ಜೊತೆಗೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ಸೂಚನೆ ನೀಡಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.