ಧಾರವಾಡ: ನಕಲಿ ದಾಖಲೆ ಸೃಷ್ಠಿಸಿ ಹು-ಧಾ ಮಹಾನಗರ ಪಾಲಿಕೆ ನೌಕರರ ಜೊತೆ ಬ್ಯಾಂಕ್ ಮ್ಯಾನೇಜರ್ ಸೇರಿಕೊಂಡು ಧಾರವಾಡ ಎಸ್ಬಿಐ ಬ್ಯಾಂಕ್ನಲ್ಲಿ ಲಕ್ಷಾಂತರ ರೂ.ಗಳಷ್ಟು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದ ವಿವರ:
ಹು-ಧಾ ಮಹಾನಗರ ಪಾಲಿಕೆಯ ವಲಯ ನಂ.01 ಖಾಯಂ ನೌಕರರು ಗುತ್ತಿಗೆ ಪೌರ ಕಾರ್ಮಿಕರ ಹೆಸರಿನಲ್ಲಿ ಖಾಯಂ ಎಂದು ಸ್ಯಾಲರಿ ಸ್ಲಿಪ್ ಸೃಷ್ಟಿ ಮಾಡಿ ವಂಚನೆ ಎಸಗಿದ್ದಾರೆ. ಇಬ್ಬರು ಪಾಲಿಕೆ ನೌಕರರು ಧಾರವಾಡದ ಎಸ್ಬಿಐ ಗಾಂಧಿ ನಗರ ಶಾಖೆಯ ಬ್ಯಾಂಕ್ ಮ್ಯಾನೇಜರ್ ಸಂಧ್ಯಾ ಎಂಬುವವರ ಸಹಕಾರದಿಂದ ಸಾಲ ಮಂಜೂರು ಮಾಡಿಸಿ ಕೊಟ್ಟಿದ್ದಾರೆ. ಬ್ಯಾಂಕ್ ಆಡಿಟ್ ವೇಳೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರ ಮೇಲೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಬ್ಯಾಂಕ್ ಮ್ಯಾನೇಜರ್ ಸಂಧ್ಯಾ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದು, ವಂಚನೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಎಸ್ಬಿಐನಿಂದ ಸಂಧ್ಯಾ ಅವರನ್ನು ಅಮಾನತುಗೊಳಿಸಲಾಗಿದೆ. ಸದ್ಯ ವಿದ್ಯಾಗಿರಿ ಪೊಲೀಸರು ರವಿಕುಮಾರ ದೊಡಮನಿ, ಹನುಮಂತ ಮಾದರ ಬಂಧನಕ್ಕೊಳಗಾದ ಪೌರ ಕಾರ್ಮಿಕರಾಗಿದ್ದಾರೆ. ಇವರ ಜೊತೆಗೆ ನಕಲಿ ಸ್ಯಾಲರಿ ಸ್ಲಿಪ್ ಸೃಷ್ಟಿಸಿದ ಜೆರಾಕ್ಸ್ ಅಂಗಡಿ ಸಿಬ್ಬಂದಿಯನ್ನು ಸಹ ಬಂಧಿಸಲಾಗಿದೆ.
ಇದನ್ನೂ ಓದಿ: ನಾವು ದೆಹಲಿಗೆ ಕದ್ದುಮುಚ್ಚಿ ಹೋಗುವುದಿಲ್ಲ: ರೇಣುಕಾಚಾರ್ಯ
ಮಲ್ಲಿಕಾರ್ಜುನ ಚಂದರಗಿ ಎಂಬಾತ ಧಾರವಾಡ ಶಂಕರ ಪ್ಲಾಜಾದಲ್ಲಿರುವ ಕಂಪ್ಯೂಟರ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತ ಪೌರ ಕಾರ್ಮಿಕರಿಗೆ ನಕಲಿ ಸ್ಯಾಲರಿ ಸ್ಲಿಪ್ ಮಾಡಿ ಕೊಟ್ಟಿದ್ದ ಆರೋಪದ ಮೇಲೆ ಜೈಲು ಸೇರಿಕೊಂಡಿದ್ದಾನೆ.
ನಕಲಿ ದಾಖಲೆ ಸೃಷ್ಟಿಸಿ ಒಟ್ಟು 42 ಜನರಿಗೆ ಸಾಲ ಮಂಜೂರು ಮಾಡಿದ್ದು, 2 ರಿಂದ 5 ಲಕ್ಷದವರೆಗೂ ಪೌರ ಕಾರ್ಮಿಕರು ಸಾಲ ಪಡೆದಿದ್ದರು. ಸುಮಾರು 5 ಕೋಟಿ ರೂ.ಗಳಷ್ಟು ಹಣವನ್ನು ಬ್ಯಾಂಕ್ಗೆ ವಂಚನೆ ಮಾಡಲಾಗಿದೆ. ವಿದ್ಯಾಗಿರಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.