ಹುಬ್ಬಳ್ಳಿ: ಕಾರ್ಮಿಕರಿಗಾಗಿ ನೀಡಲಾಗುವ ಫುಡ್ ಕಿಟ್ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಈ ಕಿಟ್ಗಳ ಬಳಕೆ ಮಾತ್ರ ತಮಗೆ ಬೇಕಾದ ಹಾಗೆ ನಡೆಯುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಪಾಲಿಕೆ ಚುನಾವಣೆ ಎದುರಲ್ಲೇ ಈ ಫುಡ್ ಕಿಟ್ ಪಾಲಿಟಿಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.
ಗೋಡೌನ್ನಲ್ಲಿ ರಾಶಿ ರಾಶಿ ಫುಡ್ಕಿಟ್ಗಳನ್ನು ಇರಿಸಲಾಗಿದ್ದು, ಇವುಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ನಾಯಕರ ಭಾವಚಿತ್ರವನ್ನು ಅಂಟಿಸಲಾಗಿದೆ. ಇವುಗಳು ಸರ್ಕಾರದ ಕಿಟ್ಗಳಾಗಿದ್ದು, ಹಂಚುವ ಮೂಲಕ ಸಚಿವರು ಬಿಟ್ಟಿ ಪ್ರಚಾರಕ್ಕೆ ಮುಂದಾಗಿದ್ದಾರೆಂದು ಕಾಂಗ್ರೆಸ್ ಯುವ ನಾಯಕರು ಆರೋಪಿಸಿದ್ದಾರೆ.
ಇವು ಕಾರ್ಮಿಕ ಇಲಾಖೆಯ ಕಿಟ್ಗಳಾಗಿದ್ದು, ಕಾರ್ಮಿಕರಿಗಾಗಿಯೇ ಪೂರೈಕೆ ಮಾಡಲು ಸಿದ್ಧವಾಗಿವೆ. ಆದ್ರೆ ಈ ಕಿಟ್ಗಳ ಮೇಲೆ ಸಿಎಂ ಸೇರಿದಂತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭಾವಚಿತ್ರವಿದೆ. ಆದ್ರೀಗ ಅವೆಲ್ಲವೂ ಕಾಣೆಯಾಗಿ ಸಚಿವರ ಸ್ಟಿಕರ್ಗಳೇ ಎಲ್ಲೆಲ್ಲೂ ಕಾಣುತ್ತಿವೆ ಎಂದು ಆರೋಪಿಸಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಪಾಲಿಕೆ ಚುನಾವಣೆ ಎನ್ನಲಾಗುತ್ತಿದೆ.
ಪಾಲಿಕೆ ಚುನಾವಣೆ ಹತ್ತಿರವಿರುವ ಕಾರಣ ಅವರವರ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿ ಈ ಕಿಟ್ ಗಳನ್ನ ನೀಡುವ ಮೂಲಕ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಅಂತ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಶೆಟ್ಟರ್ ಪ್ರತಿಕ್ರಿಯೆ
ಇದಕ್ಕೆ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದು, ನಾನು ಜಿಲ್ಲಾ ಉಸ್ತುವಾರಿ ಸಚಿವ. ಹೀಗಾಗಿ ಸ್ಟಿಕರ್ ಹಚ್ಚಲಾಗಿದೆ. ಮಾನವೀಯತೆ ದೃಷ್ಟಿಯಿಂದ ಕಿಟ್ ವಿತರಣೆ ಮಾಡಲಾಗುತ್ತಿದೆ. ಇದರ ಹಿಂದೆ ಯಾವುದೇ ಚುನಾವಣೆ ಗಿಮಿಕ್ ಇಲ್ಲ ಎಂದರು.
ಇದನ್ನೂ ಓದಿ: ಕಲಬುರಗಿಯಲ್ಲಿ 5 ವರ್ಷದ ಬಾಲಕನಿಗೆ ಮಠದ ಉತ್ತರಾಧಿಕಾರಿ ಪಟ್ಟ..!