ಹುಬ್ಬಳ್ಳಿ: ಅವರೆಲ್ಲ ವಾಣಿಜ್ಯನಗರಿಯ ಯುವ ಉತ್ಸಾಹಿಗಳು. ಇಷ್ಟುದಿನ ಪ್ರಾಣಿ ಸಂರಕ್ಷಣೆ ಕುರಿತು ಹಲವಾರು ಜಾಗೃತಿ ಅಭಿಯಾನವನ್ನು ಮಾಡಿದ ಅವರು ಈಗ ವಿನೂತನ ಪ್ರಯೋಗವೊಂದನ್ನು ಮಾಡುವ ಮೂಲಕ ಹುಬ್ಬಳ್ಳಿ ಮಾತ್ರವಲ್ಲದೆ ರಾಜ್ಯದ ಜನರ ಹುಬ್ಬೇರುವಂತೆ ಮಾಡಿದ್ದಾರೆ.
ವಾಣಿಜ್ಯನಗರಿಯ ರಾಯ್ ಸ್ಟೀಯನ್ ಯುವ ಉತ್ಸಾಹಿಗಳ ತಂಡ ಪ್ರಾಣಿಗಳ ಸಂರಕ್ಷಣೆ ಕುರಿತು ಹತ್ತು ಹಲವು ಅಭಿಯಾನ ಮಾಡಿದ್ದು, ಈಗ ಹೊಸ ತಂತ್ರಜ್ಞಾನದ ಮಷಿನ್ ಒಂದನ್ನು ಕಂಡು ಹಿಡಿದಿದ್ದು, ಇದರಲ್ಲಿ ವೇಸ್ಟ್ ವಾಟರ್ ಬಾಟಲ್ ಹಾಕಿದ್ರೇ ಸಾಕು, ಬೀದಿ ನಾಯಿಗಳಿಗೆ ಆಹಾರ ದೊರೆಯುತ್ತದೆ. ಹೌದು, ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಅದೇ ಬಾಟಲಿಯನ್ನು ಈ ಮಷಿನ್ ನಲ್ಲಿ ಹಾಕಿದ್ರೆ ಹಸಿದ ನಾಯಿಗಳ ಹೊಟ್ಟೆ ತುಂಬಿಸಬಹುದು. ಪರಿಸರವನ್ನು ಸ್ವಚ್ಛ ಸುಂದರವಾಗಿಸಬಹುದು ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಯುವಕರ ತಂಡ ಈ ಯಂತ್ರ ಶೋಧಿಸಿದೆ.
ಆಹಾರ ಸಿಗದೆ ನಾಯಿಗಳು ಹಲವಾರು ಅವಾಂತರ ಸೃಷ್ಟಿಸುತ್ತವೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಆಹಾರಕ್ಕಾಗಿ ಈ ಮಷೀನ್ ಅನ್ನು ಕಂಡು ಹಿಡಿಯಲಾಗಿದೆ. ಉಪಯೋಗಿಸಿದ ಬಾಟಲ್ ಮಷೀನ್ ಒಳಗೆ ಹಾಕಿದರೆ, ಮಷೀನ್ನಲ್ಲಿ ಮೊದಲೇ ಇಡಲಾದ ಪ್ರಾಣಿ ಆಹಾರ ದೊರೆಯುತ್ತದೆ. ಒಂದು ಬಾಟಲಿಗೆ ಇಂತಿಷ್ಟೇ ಆಹಾರ ಎಂಬ ಅಳತೆ ನಿಗದಿ ಮಾಡಲಾಗಿದೆ. ಹೀಗೆ ಖಾಲಿ ಬಾಟಲಿ ಮಷೀನ್ ಒಳಗೆ ಹಾಕಿ ಅದರಿಂದ ಸಿಗುವ ಆಹಾರವನ್ನು ನಾಯಿಗಳಿಗೆ ನೀಡಬಹುದು.
ಸಿನಿಮಾ ನಟ ಸೋನು ಸೂದ್ ಹಾಗೂ ರತನ್ ಟಾಟಾ ಅವರ ಪ್ರೇರಣೆಯಿಂದ ಈ ಉತ್ಸಾಹಿ ಯುವ ತಂಡ ಇಂತಹದೊಂದು ಕಾರ್ಯಕ್ಕೆ ಕೈ ಹಾಕಿದ್ದು, ಇದರಲ್ಲಿ ಸಿಸಿಟಿವಿಯನ್ನು ಕೂಡ ಹಾಕಲಾಗಿದ್ದು, ರಕ್ಷಣೆ ಜೊತೆಗೆ ಪ್ರಾಣಿಗಳಿಗೆ ಆಹಾರವನ್ನು ಒದಗಿಸುತ್ತವೆ.
ರಾಯ್ಸ್ಟಿಯನ್ ಫೌಂಡೇಶನ್ ರಾಯ್ಸ್ಟಿಯನ್ ತಯಾರಕರ ಸಹಯೋಗದೊಂದಿಗೆ ಹುಬ್ಬಳ್ಳಿನಗರದಿಂದ ಪ್ರಾರಂಭವಾಗುತ್ತಿದ್ದು, ಆರಂಭದಲ್ಲಿ 50 ಯಂತ್ರಗಳನ್ನು ನಿಯೋಜಿಸುವ ಮೂಲಕ ಸ್ಥಳೀಯ ತಂಡಗಳ ಸಹಾಯದಿಂದ ಭಾರತದ 15 ರಾಜ್ಯಗಳಲ್ಲಿ 750 ಯಂತ್ರಗಳನ್ನು ನಿಯೋಜಿಸುವ ಕನಸನ್ನು ಕಟ್ಟಿಕೊಂಡಿದೆ. ಪ್ರತಿಯೊಂದು ಜೀವಿಗೂ ಬದುಕುವ ಸಮಾನ ಹಕ್ಕುಗಳಿವೆ ಎಂಬುವುದನ್ನು ಪ್ರಸ್ತುತ ಪಡಿಸುತ್ತಿರುವ ಯುವ ಉತ್ಸಾಹಿಗಳ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.
ಓದಿ : ಅಂಜುದೀವ್ ದ್ವೀಪದಲ್ಲಿ ಪ್ರಾರ್ಥನೆಗೆ ಅವಕಾಶಕ್ಕಾಗಿ ಕ್ರಿಶ್ಚಿಯನ್ನರ ಒತ್ತಾಯ