ಹುಬ್ಬಳ್ಳಿ: ಕೊರೊನಾ ಎಷ್ಟೋ ದುಡಿಯುವ ಕೈಗಳನ್ನು ಕಟ್ಟಿ ಹಾಕಿದೆ. ಇದರಿಂದ ಯುವಕ-ಯುವತಿಯರು ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅಷ್ಟೆ ಅಲ್ಲ,ಕೆಲ ಯುವಕ-ಯುವತಿಯರು ಆತ್ಮಹತ್ಯೆಯತ್ತ ಮುಖ ಮಾಡಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಕೊರೊನಾದಿಂದ ನನ್ನ ಕೆಲಸ ಹೋಗಿದೆ. ಸೋಂಕು ತಗುಲಿ ನಾ ಸತ್ತರೆ ನನ್ನ ಕುಟುಂಬದವರ ಗತಿಯೇನು? ಕಳೆದ ಎರಡು ದಿನಗಳಿಂದ ನೆಗಡಿಯಾಗಿದ್ದು, ಭಯವಾಗುತ್ತಿದೆ. ನನಗೆ ಕೊರೊನಾ ಬಂದಿರಬಹುದು ಅಲ್ವಾ? ಇಲ್ಲ ಕೊರೊನಾದಿಂದ ನನಗೆ ಇರೋಕೆ ಆಗ್ತಿಲ್ಲ ನಾ ಸಾಯ್ತಿನಿ.. ಇವು ಹುಬ್ಬಳ್ಳಿ ಕಿಮ್ಸ್ ಮಾನಸಿಕ ರೋಗಿಗಳ ವಿಭಾಗದ ಸಹಾಯವಾಣಿಗೆ ಕಳೆದ ಮೂರು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಕರೆ ಮಾಡುತ್ತಿರುವವರ ಮಾತುಗಳು.
ರಾಜ್ಯದಲ್ಲಿ ಕೊರೊನಾ ವೈರಸ್ಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ಇತ್ತ ಮನೋರೋಗಕ್ಕೆ ಒಳಗಾಗುತ್ತಿರುವವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಲೇ ಇದೆ. ಮಾರ್ಚ್ ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಮಾಡಿದ ಸಂದರ್ಭದಲ್ಲಿ ಕೊರೊನಾ ರೋಗದಿಂದ ಖಿನ್ನತೆಗೆ ಒಳಗಾದವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಕೊರೊನಾದಿಂದ ಕೆಲಸ ಕಳೆದುಕೊಂಡವರು, ಕುಟುಂಬ ನಿರ್ವಹಿಸಲು ಸಮಸ್ಯೆ ಎದುರಿಸುವವರು, ಆರ್ಥಿಕ ಸಮಸ್ಯೆಗೆ ಒಳಗಾದವರು ಹೆಚ್ಚು ಖಿನ್ನತೆಗೆ ಒಳಗಾಗಿ ಕರೆ ಮಾಡುತ್ತಿದ್ದಾರೆ ಎನ್ನುವುದು ಗಮನಿಸಬೇಕಾದ ಸಂಗತಿ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಮಾನಸಿಕ ರೋಗಿಗಳ ವಿಭಾಗದಲ್ಲಿ 8277800719 ಸಹಾಯವಾಣಿ ತೆರೆಯಲಾಗಿದೆ. ಮಾನಸಿಕ ಖಿನ್ನತೆಗೆ ಒಳಗಾದವರು ಇಲ್ಲಿಗೆ ಕರೆ ಮಾಡಿದವರಿಗೆ ಧೈರ್ಯ ತುಂಬಲಾಗುತ್ತದೆ. ದಿನಕ್ಕೆ 30ಕ್ಕಿಂತ ಹೆಚ್ಚು ಜನರು ಕರೆ ಮಾಡುತ್ತಿದ್ದಾರೆ. ಕಳೆದ ಮೂರು ವಾರದಿಂದ ಕರೆ ಮಾಡುತ್ತಿರುವವರು ಹೆಚ್ಚು ಜನ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಕೈ ಹಾಕುತ್ತಿದ್ದಾರೆ ಎನ್ನುವುದು ಆತಂಕದ ವಿಷಯ.
ಕಿಮ್ಸ್ ಮಾನಸಿಕ ರೋಗಿಗಳ ವಿಭಾಗಕ್ಕೆ ಮಾರ್ಚ್ ನಂತರ ನಾಲ್ಕು ತಿಂಗಳಲ್ಲಿ 1,500ಕ್ಕೂ ಹೆಚ್ಚು ಕರೆಗಳು ಬಂದಿವೆ. ಈ ಪೈಕಿ ಯುವಕ, ಯುವತಿಯರ ಪಾಲು ಕೂಡ ಹೆಚ್ಚಾಗಿದ್ದು, ಉದ್ಯೋಗ, ಮುಂದಿನ ಜೀವನ, ಕೊರೊನಾ ಭಯಕ್ಕೆ ಸಂಬಂಧಪಟ್ಟ ಪ್ರಕರಣಗಳೇ ಹೆಚ್ಚು. ನಿತ್ಯ ಬರುವ ಕರೆಗಳನ್ನು ವೈದ್ಯರ ತಂಡ ಸ್ವೀಕರಿಸಿ ಫೋನ್ ಮೂಲಕ ಕೌನ್ಸಲಿಂಗ್ ಮಾಡಲಾಗುತ್ತಿದೆ. ಅವರ ಸಮಸ್ಯೆಗೆ ವೈಜ್ಞಾನಿಕ ಮಾಹಿತಿ ನೀಡಿ ಧೈರ್ಯ ತುಂಬಲಾಗುತ್ತಿದೆ. ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುವಂತವರಿಗೆ ಆಸ್ಪತ್ರೆಗೆ ಕರೆಯಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊದಲು ಮೂರು ಅವಧಿಯಲ್ಲಿ ಹೆಲ್ಪ್ ಲೈನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಂಡ ಈಗ ಒಬ್ಬ ಸಿಬ್ಬಂದಿಯನ್ನು ಪೂರ್ಣ ಪ್ರಮಾಣದಲ್ಲಿ ನಿಯುಕ್ತಿಗೊಳಿಸಿದ್ದು, ಫೋನ್ ಹಾಗೂ ವಿಡಿಯೋ ಕಾಲ್ ಮೂಲಕ ಸಮಾಲೋಚನೆ ನಡೆಸಿ ಪರಿಹಾರ ನೀಡಲಾಗುತ್ತಿದೆ.