ಧಾರವಾಡ: ಕರ್ನಾಟಕ ಕೃಷಿ ವಿಶ್ವ ವಿದ್ಯಾಲಯದ ವೈದ್ಯಾಧಿಕಾರಿಯೊಬ್ಬರು ನಾಯಿ ಹೊಟ್ಟೆಯೊಳಗಿನ ಕ್ಯಾನ್ಸರ್ ಗಡ್ಡೆಗಳನ್ನು ಹೊರ ತೆಗೆದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಕೃಷಿ ವಿಶ್ವ ವಿದ್ಯಾಲಯದ ಪಶು ಚಿಕಿತ್ಸಾ ವಿಭಾಗದ ವೈದ್ಯ ಡಾ.ಅನಿಲಕುಮಾರ ಪಾಟೀಲ ಮತ್ತು ತಂಡ ಕ್ಯಾನ್ಸರ್ನಿಂದ ಬಳಲುತ್ತಿದ್ದ ನಾಯಿಯೊಂದಕ್ಕೆ ವಿಶೇಷ ಚಿಕಿತ್ಸೆ ನೀಡಿ, ಹತ್ತು ಕ್ಯಾನ್ಸರ್ ಗಡ್ಡೆಗಳನ್ನು ಹೊರ ತೆಗೆದು ಶ್ವಾನಕ್ಕೆ ಪುನರ್ಜನ್ಮ ನೀಡಿದ್ದಾರೆ.
ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಲ್ಯಾಬ್ರೊಡಾರ್ ಎಂಬ ನಾಯಿಯೇ ಈ ವಿಶೇಷ ಚಿಕಿತ್ಸೆಗೆ ಒಳಗಾಗಿದೆ. ಈ ನಾಯಿಯು ಅಬಡೋಮಿನಲ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿತ್ತು. ಒಂದೂವರೆ ವರ್ಷದ ವಯಸ್ಸಿನಲ್ಲೊಮ್ಮೆ ಇದಕ್ಕೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಇದನ್ನೂ ಓದಿ: ಮೀನುಗಾರಿಕಾ ಬೋಟುಗಳಲ್ಲಿ ಸ್ವದೇಶಿ ನಿರ್ಮಿತ ಯಂತ್ರಗಳ ಬಳಕೆಗೆ ಚಿಂತನೆ : ಸಚಿವ ಕೋಟ
ಹತ್ತು ದಿನಗಳಿಂದ ನಾಯಿ ಆಹಾರ ಸೇವಿಸದೇ ಒದ್ದಾಡುತಿತ್ತು. ಏನೇ ತಿಂದರೂ ವಾಂತಿ ಮಾಡಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ನಾಯಿಯನ್ನು ವೈದ್ಯರ ಬಳಿ ತೋರಿಸಿದಾಗ ಸೋನೋಗ್ರಾಫಿ ಮಾಡಿ ನೋಡಿದಾಗ ಹೊಟ್ಟೆಯೊಳಗೆ ಗಂಟುಗಳಿರುವುದು ಪತ್ತೆಯಾಗಿದೆ.
ಈ ಹಿಂದೆ ಕೂಡ ಇಂತಹ ವಿಶೇಷ ಚಿಕಿತ್ಸೆಗಳನ್ನು ಮಾಡಿದ ವೈದ್ಯರ ತಂಡ, ನಾಯಿ ಹೊಟ್ಟೆಯಿಂದ ಹತ್ತು ಕ್ಯಾನ್ಸರ್ ಗಡ್ಡೆಗಳನ್ನು ಹೊರತೆಗೆದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸತತ ನಾಲ್ಕೈದು ಗಂಟೆಗಳ ಕಾಲ ನಾಯಿಗೆ ಆಪರೇಷನ್ ಮಾಡಲಾಗಿದೆ.