ದಾವಣಗೆರೆ: ಜಿಲ್ಲೆಯ ಪುಣ್ಯಕ್ಷೇತ್ರ ಉಚ್ಚಂಗಿದುರ್ಗದಲ್ಲಿರುವ ಶ್ರೀ ಉಚ್ಚಂಗೆಮ್ಮ ದೇವಾಲಯದಲ್ಲಿ ಕಾಣಿಕೆ ಹುಂಡಿ ಹಣ ಎಣಿಸಲಾಗಿದ್ದು, ಶನಿವಾರ ಬೆಳಗ್ಗೆ 10.30 ರಿಂದ ಆರಂಭವಾದ ಹಣ ಎಣಿಕೆ ಕಾರ್ಯ ರಾತ್ರಿ 09 ಗಂಟೆರವರೆಗೆ ಹುಂಡಿ ಹಣ ಎಣಿಕೆ ಪ್ರಕ್ರಿಯೆ ನಡೆಯಿತು.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಪ್ರಕಾಶರಾವ್ ಸಮ್ಮುಖದಲ್ಲಿ ಈ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ 48,52,383 ರೂಪಾಯಿ ಸಂಗ್ರಹವಾಗಿದೆ. ಇನ್ನು, ಉಚ್ಚೆಂಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಹರಪನಹಳ್ಳಿ ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ದೇವಸ್ಥಾನದ ಖಾತೆಗೆ ಜಮಾ ಮಾಡಲು ಹಸ್ತಾಂತರ ಮಾಡಲಾಯಿತು. ಇದೇ ವರ್ಷ ಜುಲೈ ತಿಂಗಳಿನಲ್ಲಿ ಕಾಣಿಕೆ ಎಣಿಕೆ ಕಾರ್ಯ ನಡೆದಿತ್ತು.
ಇನ್ನು, ಹುಂಡಿ ಎಣಿಕೆ ಪ್ರಕ್ರಿಯೆ ಬಳಿಕ ದೇವಿಗೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದ ವಿವಿಧ ಬಗೆಯ ಸೀರೆಗಳ ಹರಾಜು ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಬಳ್ಳಾರಿ ವಿಜಯನಗರ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾದ ಪ್ರಕಾಶ್ ರಾವ್, ಸೋಗಿ ವೀರಭದ್ರೇಶ್ವರ, ಗುಮಾಸ್ತ ಚನ್ನಬಸವರಾಧ್ಯ, ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಪ್ರಸನ್ನ, ಅರ್ಚಕರಾದ ಕೆಂಚಪ್ಪ, ದೇವಸ್ಥಾನದ ಸಿಬ್ಬಂದಿ, ಪೊಲೀಸ್ ಇಲಾಖೆ, ಹಾಗೂ ಮುಜುರಾಯಿ ಇಲಾಖೆ ಸಿಬ್ಬಂದಿ, ಪ್ರವಾಸಿ ಪೊಲೀಸ್ ಮತ್ತು ಅರ್ಚಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ದಾವಣಗೆರೆಯ ಮಹಾನಗರ ಪಾಲಿಕೆಯಲ್ಲಿ ಸರ್ವರ್ ಡೌನ್, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಜನ