ದಾವಣಗೆರೆ: ವಿಘ್ನ ವಿನಾಶಕ, ವಿಘ್ನ ನಿವಾರಕ ಎಂದೆಲ್ಲಾ ಕರೆಸಿಕೊಳ್ಳುವ ಗಣೇಶ, ಚತುರ್ಥಿ ಬಂದರೆ ತರಹೇವಾರಿ ರೂಪಗಳಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಾನೆ. ಇತ್ತ ಬೆಣ್ಣೆ ನಗರಿಯಲ್ಲೂ ನವಿಲು ಗರಿಯಲ್ಲಿ ವಕ್ರತುಂಡ ಅರಳಿ ನಿಂತಿದ್ದಾನೆ.
ಬೆಣ್ಣೆನಗರಿಯಲ್ಲಿ ನವಿಲು ಗರಿಗಳಿಂದ ಸಿದ್ಧಗೊಂಡ ವಿಘ್ನವಿನಾಶಕ
ನಗರದ ತೋಗಟವೀರ ಕಲ್ಯಾಣ ಮಂಟಪದಲ್ಲಿ ಹಿಂದು ಯುವಶಕ್ತಿ ವೇದಿಕೆ ಕಾರ್ಯಕರ್ತರು ಈ ನವಿಲುಗರಿ ಗಣಪತಿಯನ್ನ ಪ್ರತಿಷ್ಠಾಪಿಸಿದ್ದಾರೆ. ಬರೋಬ್ಬರಿ 5001 ನವಿಲು ಗರಿಗಳನ್ನು ಬಳಸಿ, ಗಣೇಶ ಮೂರ್ತಿ ತಯಾರಿಸಲಾಗಿದೆ. ನವಿಲು ಗರಿಗಳಿಂದ ತಯಾರಾದ 13 ಅಡಿ ಎತ್ತರದ ಗಣೇಶ ಎಲ್ಲರನ್ನೂ ಆಕರ್ಷಿಸುತ್ತಿದೆ. ಪ್ರತಿ ಬಾರಿಯೂ ನಗರದಲ್ಲಿ ವಿಶೇಷ ರೀತಿಯಲ್ಲಿ ವಿದ್ಯಾ ವಿನಾಯಕನನ್ನು ತಯಾರಿಸಲಾಗುತ್ತದೆ. ಕಳೆದ ಬಾರಿ ಬರೋಬ್ಬರಿ 13 ಸಾವಿರ ಇಷ್ಟಲಿಂಗಗಳನ್ನು ಬಳಸಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಬಾರಿ ನವಿಲುಗರಿಯಲ್ಲಿ ಗಣೇಶ ಅರಳಿದ್ದಾನೆ.
ಇಲ್ಲಿನ ವಿನೋಬನಗರದಲ್ಲಿ ಹಿಂದೂ-ಮುಸ್ಲಿಂರು ಒಟ್ಟಿಗೆ ಸೇರಿ ಗಜಮುಖನನ್ನು ಪ್ರತಿಷ್ಠಾಪಿಸುತ್ತಾರೆ. ಅಲ್ಲದೆ, ಮೆರವಣಿಗೆಯಲ್ಲಿ ಒಟ್ಟಿಗೆ ಪಾಲ್ಗೊಂಡು ಭಾವೈಕ್ಯತೆ ಮೆರೆಯುವುದು ವಿಶೇಷ.