ದಾವಣಗೆರೆ: ರೈತರಿಗೆ ಒಂದಲ್ಲೊಂದು ಸಮಸ್ಯೆಗಳು ಕಾಡುತ್ತವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೊಲ್ಲರಹಳ್ಳಿಯ ಮೆಕ್ಕೆಜೋಳ ರೈತರಿಗೆ ಗಿಳಿಗಳ ಕಾಟ ಎದುರಾಗಿದೆ. ಗೊಲ್ಲರಹಳ್ಳಿಯ ನಿವಾಸಿಯಾದ ರೈತ ವೆಂಕಟೇಶ್ ತನ್ನ ಆರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಗೆ ಗಿಳಿಗಳ ಹಿಂಡು ದಾಳಿ ನಡೆಸಿ ಕಾಳು ಕಟ್ಟುವ ಮುನ್ನವೇ ಹಸಿ ತೆನೆಗಳನ್ನು ತಿಂದು ತೇಗಿವೆ.
ಕಳೆದ ವರ್ಷದಂತೆ ಈ ವರ್ಷ ಕೂಡ ಗಿಳಿಗಳ ಕಾಟದಿಂದ ಗೊಲ್ಲರಹಳ್ಳಿ ರೈತರು ಹೈರಾಣಾಗಿದ್ದಾರೆ. ಮೆಕ್ಕೆಜೋಳ ಫಸಲು ಕೈಗೆ ಬರುವ ಮುನ್ನವೆ ಗಿಳಿಗಳ ಪಾಲಾಗಿದ್ದು, ಬೆಳೆ ಬೆಳೆಯಲು ಆದ ಖರ್ಚು ಕೂಡ ಸಿಗದೆ ಇರುವುದರಿಂದ ರೈತರು ಪರಿಹಾರಕ್ಕಾಗಿ ಸರ್ಕಾರದ ಕದ ತಟ್ಟಿದ್ದಾರೆ. ಈ ಗೊಲ್ಲರ ಹಳ್ಳಿ ಸುತ್ತಮುತ್ತ ಒಟ್ಟು 120 ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ಬೆಳೆದಿದ್ದ ಮುಸುಕಿನ ಜೋಳ ಗಿಳಿಗಳ ಪಾಲಾಗಿರುವುದು ರೈತರನ್ನು ದಿಕ್ಕು ತೋಚದಂತೆ ಮಾಡಿದೆ.
ರೈತ ವೆಂಕಟೇಶ್ ತನ್ನ ಆರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಗೆ ಎಕರೆಗೆ ಇಪ್ಪತ್ತು ಸಾವಿರದಂತೆ ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ವ್ಯಯ ಮಾಡಿದ್ದಾರೆ. ಅದರೆ ಗಿಳಿಗಳು ಶೇಕಡಾ 90ರಷ್ಟು ಫಸಲನ್ನು ತಿಂದಿದ್ದು, ರೈತರಿಗೆ ಏನೂ ಸಿಗದಂತಾಗಿದೆ.
ರೈತ ವೆಂಕಟೇಶ್ ಕೂಲಿಗಳನ್ನು ನೇಮಿಸಿ, ಡಬ್ಬ ಬಡಿಯುವ ಮೂಲಕ ಗಿಳಿಗಳನ್ನು ಓಡಿಸುವ ಪ್ರಯತ್ನ ವಿಫಲವಾಗಿದ್ದು, ಕೂಲಿ ನೀಡಲು ಆಗದ ಪರಿಸ್ಥಿತಿ ವೆಂಕಟೇಶ್ಗೆ ಬಂದೊದಗಿದೆ. ಈಗಾಗಲೇ ಜಮೀನಿಗೆ ತಹಶೀಲ್ದಾರ್, ಎಸಿ ಸೇರಿದಂತೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿ ರೈತ ವೆಂಕಟೇಶ್ಗೆ ಪರಿಹಾರ ಕಲ್ಪಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.