ದಾವಣಗೆರೆ : "ನಾನು ಟಿಕೆಟ್ ಕೇಳಿಲ್ಲ. ಆದರೂ ನೀಡಲಾಗಿದೆ. ಹೈಕಮಾಂಡ್ ಗೆ ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ, ಯಾರಿಗೆ ಬೇಕಾದರೂ ಟಿಕೆಟ್ ಕೊಡಿ. ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ ಎಂದು. ಆಗ ವಯಸ್ಸಾಗಿದೆ ಅಂತಾ ಹೇಳಿ ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದರು. ಈಗ ನನಗೆ ವಯಸ್ಸಾಗಿಲ್ವಾ ಎಂಬ ಪ್ರಶ್ನೆಯನ್ನೇ ಕೇಳಿದ್ದೇನೆ. ಆಗಿನ ಬೇಸರವೇ ಈಗ ಚುನಾವಣೆಗೆ ನಿಲ್ಲದಿರಲು ಕಾರಣ' ಎಂದು ಶಾಮನೂರು ಶಿವಶಂಕರಪ್ಪ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಸಚಿವ ಸ್ಥಾನ ಕಿತ್ತುಕೊಂಡ ಬೇಸರ ಇನ್ನೂ ಹೋಗಿಲ್ಲ...!
ದಾವಣಗೆರೆಯಲ್ಲಿ ಮಾತನಾಡಿದ ಶಿವಶಂಕರಪ್ಪ, ಟಿಕೆಟ್ ನನಗೆ ಬೇಡ ಎಂದಿದ್ದೆ. ನಾನು ಕೇಳದಿದ್ದರೂ ಟಿಕೆಟ್ ಯಾಕೆ ಕೊಡಬೇಕಿತ್ತು, ಆಗ ವಯಸ್ಸಾಗಿದೆ ಅಂತಾ ಹೇಳಿ ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದರು. ಈಗ ನನಗೆ ವಯಸ್ಸಾಗಿಲ್ವಾ ಎಂಬ ಪ್ರಶ್ನೆಯನ್ನೇ ಕೇಳಿದ್ದೇನೆ. ಇನ್ನು ತನ್ನ ಪುತ್ರ, ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸ್ಪರ್ಧೆ ವಿಚಾರ ನನಗೆ ಗೊತ್ತಿಲ್ಲ. ಇದನ್ನು ಮಲ್ಲಿಕಾರ್ಜುನ್ ನಿರ್ಧರಿಸುತ್ತಾನೆ. ಈ ಬಗ್ಗೆ ಹೆಚ್ಚೇನೂ ಹೇಳೋದಿಲ್ಲ ಎಂದರು.
ಅಧಿಕಾರ ಬೇಡ ಎಂದು ಈ ಹಿಂದೆಯೇ ಬಿಟ್ಟುಕೊಟ್ಟಿದ್ದೇನೆ. ಈಗ ನನಗ್ಯಾಕೆ ಎಂದು ಪ್ರಶ್ನಿಸಿದರು.
ನಾನು ಯಾರ ಹೆಸರೂ ಸೂಚಿಸಿಲ್ಲ...!
ಯಾರ ಹೆಸರನ್ನೂ ಸೂಚಿಸಿಲ್ಲ. ಹೈಕಮಾಂಡ್ ಅಭ್ಯರ್ಥಿ ಯಾರೆಂಬುದನ್ನು ನಿರ್ಧರಿಸುತ್ತದೆ. ಯಾರೇ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಕೆಲಸ ಮಾಡಬೇಕಾಗುತ್ತದೆ. ನನಗೆ ಟಿಕೆಟ್ ಕೊಟ್ಟಾಗ ಬೆಂಗಳೂರಿಗೆ ಹೋಗಿ ಬಂದ ಮೇಲೆ ಸರ್ಪ್ರೈಸ್ ಕೊಡುತ್ತೇನೆ ಎಂದು ಹೇಳಿದ್ದೆ. ನಾನು ಸ್ಪರ್ಧೆ ಮಾಡದಿರುವುದೇ ಈಗಿನ ಸರ್ಪ್ರೈಸ್ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನನ್ನ ಜೊತೆ ಮಾತನಾಡಿಲ್ಲ. ಅವರೊಟ್ಟಿಗೆ ಮಾತನಾಡುವುದಾದರೂ ಏನಿದೆ. ಅವರ ಕೆಲಸ ಅವ್ರು ಮಾಡ್ತಾರೆ. ನಮ್ಮ ಕೆಲಸ ನಾವ್ ಮಾಡ್ತೇವೆ. ದಾವಣಗೆರೆ ಲೋಕಸಭಾ ಚುನಾವಣೆಗೆ ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ಇನ್ನು ಅಂತಿಮವಾಗಿಲ್ಲ. ಈ ಸಂಬಂಧ ಬೆಂಗಳೂರಿನಲ್ಲಿ ಯಾವ ಸಭೆನೂ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್ ಅವರಿಗೆ ಬೆಂಗಳೂರಿಗೆ ಬರುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿರುವ ವಿಚಾರ ಗೊತ್ತಿದೆ. ಈಗ ಎಸ್. ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪನೂ ಬೆಂಗಳೂರಿಗೆ ಹೋಗಿದ್ದಾರೆ. ಅಲ್ಲಿ ಏನಾಗುತ್ತೆ ಅನ್ನೋದನ್ನು ಕಾದು ನೋಡೋಣ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.