ದಾವಣಗೆರೆ: ಅನರ್ಹ ಶಾಸಕರು ಚುನಾವಣೆಗೆ ನಿಲ್ಲಬಹುದೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಹಾಗಾಗಿ ಅವರು ಅನರ್ಹರು ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಉಪಚುನಾವಣೆಯ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದ್ದು, ಜೆಡಿಎಸ್ ಬೆಂಬಲದ ಪ್ರಶ್ನೆಯೇ ಬರುವುದಿಲ್ಲ. ನೂರಕ್ಕೆ ನೂರು ನಾವು 15 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸುತ್ತೇವೆ. ಗೆದ್ದು ಮೂರುವರೆ ವರ್ಷ ಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮಗೆ ನಿರೀಕ್ಷೆಗೂ ಮೀರಿ ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದ್ದು, ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಇನ್ನು ಚುನಾವಣೆ ಮುಗಿದ ಬಳಿಕ ಬಿಎಸ್ವೈ ಸರ್ಕಾರ ಪತನವಾಗುತ್ತೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲ್ಲ. 9ನೇ ತಾರೀಕಿನಂದು ಜನರೇ ಅವರಿಗೆಲ್ಲ ಉತ್ತರಿಸಲಿದ್ದಾರೆ ಎಂದರು.
ಪಾಲಿಕೆಯ ನಾಲ್ವರು ನೂತನ ಸದಸ್ಯರು ಬಿಜೆಪಿಗೆ ಮರು ಸೇರ್ಪಡೆ
ಇನ್ನು ಇದೇ ಸಮಯದಲ್ಲಿ ಬಿಜೆಪಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಪಾಲಿಕೆಯ ನಾಲ್ವರು ನೂತನ ಸದಸ್ಯರು, ಸಿಎಂ ಬಿಎಸ್ವೈ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾದರು. 32ನೇ ವಾರ್ಡ್ನ ಉಮಾ ಪ್ರಕಾಶ್, 19ನೇ ವಾರ್ಡ್ನ ಆರ್. ಎಲ್. ಶಿವಪ್ರಕಾಶ್, 1ನೇ ವಾರ್ಡ್ನ ಸೌಮ್ಯ ನರೇಂದ್ರಕುಮಾರ್ ಹಾಗೂ 30ನೇ ವಾರ್ಡ್ನ ಸದಸ್ಯೆ ಜಯಮ್ಮ ಸೇರಿ ಒಟ್ಟು ನಾಲ್ವರು ನೂತನ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡರು.
ಮಹಾನಗರ ಪಾಲಿಕೆಯ ಒಟ್ಟು 45 ವಾರ್ಡ್ಗಳಲ್ಲಿ ನಾಲ್ವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಲೇ ಬಿಜೆಪಿ ಸಂಖ್ಯೆ 21ಕ್ಕೆ ಏರಿದೆ. ಇತ್ತ ಕಾಂಗ್ರೆಸ್ 22 ವಾರ್ಡ್ಗಳಲ್ಲಿ ಜಯಗಳಿಸಿದೆ. 43ನೇ ವಾರ್ಡ್ನ ಪಕ್ಷೇತರ ಸದಸ್ಯ ಕಾಂಗ್ರೆಸ್ಗೆ ಬೆಂಬಲ ಘೋಷಣೆ ಮಾಡುತ್ತಾರೆ ಎನ್ನಲಾಗಿದ್ದು, ಓರ್ವ ಜೆಡಿಎಸ್ ಸದಸ್ಯೆ ಇನ್ನು ತಮ್ಮ ನಿಲುವನ್ನು ಬಿಟ್ಟುಕೊಟ್ಟಿಲ್ಲ. ಒಟ್ಟು ಎರಡು ಪಕ್ಷದ ನಾಯಕರು ಈ ಬಾರಿ ಪಾಲಿಕೆ ಚುಕ್ಕಾಣಿ ನಮ್ಮದೇ ಎಂದು ಹೇಳುತ್ತಿದ್ದು, ನಂಬರ್ ಗೇಮ್ನಲ್ಲಿ ಪಾಲಿಕೆಯ ಆಡಳಿತ ಯಾರಿಗೆ ಒಲಿಯಲಿದೆ ಎಂಬ ಕೂತೂಹಲ ಮನೆ ಮಾಡಿದೆ.