ದಾವಣಗೆರೆ: ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದರೆ ನಾವು ಯಾವ ತ್ಯಾಗಕ್ಕೂ ಸಿದ್ಧ ಎಂದು ಜಗಳೂರು ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಸ್ಫೋಟಕ ಹೇಳಿಕೆ ನೀಡಿದರು.
ದಾವಣಗೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು, ಸಿಎಂ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವೆಲ್ಲ ಸಿದ್ಧರಿದ್ದೇವೆ. ನಾನು ಕೂಡ ಸಿಎಂ ಆಪ್ತ ವಲಯದಲ್ಲಿ ಕಾಣಿಸಿಕೊಂಡ ಶಾಸಕ. ಎರಡು ವರ್ಷ ಸಿಎಂ ಆಗಿ ಯಡಿಯೂರಪ್ಪನವರೇ ಮುಂದುವರೆಯುತ್ತಾರೆ, ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಸುತ್ತೇವೆ. ನಾನು ಕೂಡ ಇವತ್ತು ಬೆಂಗಳೂರಿಗೆ ಹೋಗಬೇಕಿತ್ತು ಆದರೆ ಅನಾರೋಗ್ಯದ ಕಾರಣ ಹೋಗಿಲ್ಲ. ಯಾರೋ ಒಬ್ಬ ಸಿಎಂ ಬದಲಾವಣೆ ಮಾಡಬೇಕು ಎಂದು ಓಡಾಡ್ತಾ ಇದ್ದಾನೆ. ಯಾವನೋ ಒಬ್ಬ ಕೂಗಾಡಿದರೆ ಯಾರ್ ಕೇಳ್ತಾರೆ. ಅವನನ್ನು ಯಡಿಯೂರಪ್ಪನವರು ಬೆಳೆಸಿದರು, ಈ ಮಟ್ಟಕ್ಕೆ ತಂದು ಕೂರಿಸಿದರು ಎಂದು ಸಚಿವ ಸಿ.ಪಿ. ಯೋಗೇಶ್ವರ್ಗೆ ಶಾಸಕ ರಾಮಚಂದ್ರಪ್ಪ ಪರೋಕ್ಷವಾಗಿ ಟಾಂಗ್ ನೀಡಿದರು.
ಎಲ್ಲಾ ಶಾಸಕರು ಸಿಎಂ ಪರ ಇದ್ದಾರೆ..
ಎಲ್ಲಾ ಎಂಎಲ್ಎ ಗಳು ಯಡಿಯೂರಪ್ಪ ಪರ ಇದ್ದು, ಸಹಿ ಹಾಕಿದ 65 ಶಾಸಕರಲ್ಲಿ ನಾನು ಕೂಡ ಇದ್ದೇನೆ. 65 ಜನರು ಅಷ್ಟೇ ಅಲ್ಲ ಎಲ್ಲಾ ಶಾಸಕರು ಕೂಡ ಯಡಿಯೂರಪ್ಪ ಪರವಾಗಿ ಇದ್ದೇವೆ. ಕೆಲ ವಿದ್ಯಮಾನಗಳಿಂದ ಬೇಸತ್ತು ಯಡಿಯೂರಪ್ಪನವರು ಆ ರೀತಿ ಹೇಳಿಕೆ ನೀಡಿರಬಹುದು ಅಷ್ಟೇ ಎಂದು ತಿಳಿಸಿದರು.