ಪುತ್ತೂರು: ಸರ್ಕಾರದ ಸೂಚನೆಯಂತೆ ಏಪ್ರಿಲ್ 1ರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ 2 ತಿಂಗಳ ಪಡಿತರ ನೀಡಬೇಕಾಗಿದೆ. ಆದರೆ, ಸಮರ್ಪಕ ಸರಬರಾಜು ಕೊರತೆಯಿಂದ ಪಡಿತರಕ್ಕಾಗಿ ಬರುವ ಬಡಜನರು ನಿರಾಶೆಯಿಂದ ವಾಪಸ್ ಹೋಗುವಂತಾಗಿದೆ.
ತಾಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ, ಬೇಳೆ ಸಹಿತ ಪಡಿತರ ಇನ್ನೂ ಸರಬರಾಜುಗೊಂಡಿಲ್ಲ. ಗ್ರಾಮೀಣ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಏ. 5ರಿಂದ ಪಡಿತರ ನೀಡುವುದಾಗಿ ಜನತೆಗೆ ತಿಳಿಸಿದ್ದಾರೆ.
ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಆಶ್ರಯದಲ್ಲಿ ನಡೆಯುವ ಪುತ್ತೂರು ಹಾಗೂ ಮಂಜಲ್ಪಡ್ಪು ನ್ಯಾಯಬೆಲೆ ಅಂಗಡಿಗಳಿಗೆ ಏಪ್ರಿಲ್ ತಿಂಗಳ ಅಕ್ಕಿ ಸರಬರಾಜು ಆಗಿಲ್ಲ. ಇದರಿಂದಾಗಿ 1500 ಕುಟುಂಬಗಳು ನ್ಯಾಯಬೆಲೆ ಅಂಗಡಿಗಳತ್ತ ಬಂದು ನಿರಾಸೆಯಿಂದ ಮರಳುತ್ತಿದ್ದಾರೆ.
ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಒಟ್ಟು 11 ಸಾವಿರ ಕ್ವಿಂಟಾಲ್ ಅಕ್ಕಿ ಪೂರೈಕೆಯಾಗಬೇಕಿದೆ. ಇದೀಗ 2 ಸಾವಿರ ಕ್ವಿಂಟಾಲ್ ಮಾತ್ರ ಸರಬರಾಜಾಗಿದೆ. ತಹಶೀಲ್ದಾರ್ ರಮೇಶ್ ಬಾಬು ಅವರ ಪ್ರಕಾರ ಏಪ್ರಿಲ್ 10ರೊಳಗೆ ಸಂಪೂರ್ಣ ಪಡಿತರ ಪೂರೈಕೆಯಾಗಲಿದೆ.
ನಗರದ ಜನತೆಗೆ ಪಡಿತರ ವಿತರಣೆಗೆ 2 ವಾರ ಸಮಯ ಬೇಕಾಗುತ್ತದೆ. ಹೀಗಾದ್ರೆ ಗ್ರಾಮೀಣ ಭಾಗದ ಫಲಾನುಭವಿಗಳಿಗೆ ಮತ್ತಷ್ಟು ವಿಳಂಬವಾಗಲಿದೆ. ಏಪ್ರಿಲ್ ತಿಂಗಳ ಮತ್ತು ಹೆಚ್ಚುವರಿ ಅಕ್ಕಿ ಬಂದಿಲ್ಲ. ಇಲ್ಲಿರುವ ಅಕ್ಕಿಯನ್ನೇ ನೀಡುತ್ತಿದ್ದೇವೆ ಎಂದು ಬನ್ನೂರು ಸೇವಾ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ತಿಳಿಸಿದರು.