ಮಂಗಳೂರು : ತುಳು ಸಿನಿಮಾ ರಂಗದಲ್ಲಿ 'ಅರ್ಜುನ್ ವೆಡ್ಸ್ ಅಮೃತಾ' ಎಂಬ ಹಿಟ್ ಚಿತ್ರ ನೀಡಿದ್ದ ಪ್ರತಿಭಾವಂತ ನಿರ್ದೇಶಕ ರಘು ಶೆಟ್ಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ರಘು ಶೆಟ್ಟಿಯವರು, ಶನಿವಾರ ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ತಮ್ಮ ಮೊದಲ ಸಿನಿಮಾ 'ಅರ್ಜುನ್ ವೆಡ್ಸ್ ಅಮೃತಾ' ಮೂಲಕ ಅಸಂಖ್ಯಾತ ಪ್ರೇಮಿಗಳ ಮನಸ್ಸನ್ನು ರಘುಶೆಟ್ಟಿ ಸೆಳೆದಿದ್ದರು. ಅಲ್ಲದೆ ಇದೊಂದು ಫ್ಯಾಮಿಲಿ ಹಿಟ್ ಸಿನಿಮಾವಾಗಿ ಗಮನ ಸೆಳೆದಿತ್ತು. ಈ ಸಿನಿಮಾ ನಿರ್ದೇಶನಕ್ಕೆ ರಘು ಶೆಟ್ಟಿಯವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡಾ ಪಡೆದಿದ್ದರು.
ನಟ ಕೋಮಲ್ ಜೊತೆ ಕನ್ನಡ ಸಿನಿಮಾ ತಯಾರಿಯಲ್ಲಿದ್ದ ರಘು ಶೆಟ್ಟಿ, ಇನ್ನೇನು ಸಿನಿಮಾ ಚಿತ್ರೀಕರಣ ನಡೆಸುವವರಿದ್ದರು. ಈ ಮೂಲಕ ಕೋಸ್ಟಲ್ ವುಡ್ನಿಂದ ಸ್ಯಾಂಡಲ್ ವುಡ್ಗೆ ಪಾದಾರ್ಪಣೆ ಮಾಡುವ ಕನಸಿನಲ್ಲಿದ್ದರು. ಅದರೆ, ಅಷ್ಟರಲ್ಲಾಗಲೇ ಕಾಣದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ತುಳು ಸಿನಿಮಾ ರಂಗದಲ್ಲಿ ಇನ್ನಷ್ಟು ಚಿತ್ರಗಳನ್ನು ಮಾಡುವ ಕನಸಿನಲ್ಲಿದ್ದ ರಘು ಶೆಟ್ಟಿಯವರ ನಿಧನಕ್ಕೆ ತುಳು ಸಿನಿಮಾ ರಂಗ ಕಂಬನಿ ಮಿಡಿದಿದೆ.