ಮಂಗಳೂರು: ಹುಟ್ಟುವಾಗಲೇ ಏಳು ಬೆರಳುಗಳನ್ನು ಹೊಂದಿದ್ದ ಹಾಗೂ ಹೆಬ್ಬೆರಳು ಇಲ್ಲದೇ ಜನಿಸಿದ್ದ ಮಗುವಿನ ಕೈಯನ್ನು ಮಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಸರಿಪಡಿಸಲಾಗಿದೆ.
ಹತ್ತು ದಿನಗಳ ಹಿಂದೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆಯಿತು. ಬೆಂಗಳೂರಿನ ಮಗುವೊಂದಕ್ಕೆ ಹುಟ್ಟುವಾಗಲೇ ಹೆಬ್ಬೆರಳು ಇಲ್ಲದೆ ಏಳು ಬೆರಳುಗಳಿದ್ದವು. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಮಿರರ್ ಹ್ಯಾಂಡ್ ಎಂದು ಕರೆಯುತ್ತಾರೆ. ಹುಟ್ಟುವಾಗಲೇ ಮಗು ಈ ನ್ಯೂನತೆ ಹೊಂದಿರುವುದರಿಂದ ಮಗುವಿನ ಹೆತ್ತವರು ಖ್ಯಾತ ಹ್ಯಾಂಡ್ ಸರ್ಜನ್ ಡಾ. ಭಾಸ್ಕರಾನಂದ ಕುಮಾರ್ ಅವರ ಬಳಿ ಕರೆದುಕೊಂಡು ಬಂದಿದ್ದರು.
ಡಾ. ಭಾಸ್ಕರಾನಂದ ಕುಮಾರ್ ಅವರು ಮಗುವಿನ ಬೆರಳಿನ ಶಸ್ತ್ರಚಿಕಿತ್ಸೆಯನ್ನು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ನಡೆಸಿದರು. ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಎರಡೂವರೆ ಗಂಟೆಗಳ ಅವಧಿಯಲ್ಲಿ ಮುಗಿಸಿ ಹೆಚ್ಚುವರಿ ಬೆರಳನ್ನು ತೆಗೆದು ಹೆಬ್ಬೆರಳನ್ನು ಜೋಡಿಸಲಾಯಿತು. ಶಸ್ತ್ರಚಿಕಿತ್ಸೆ ಚಿಕಿತ್ಸೆ ಬಳಿಕ ಮಗು ಗುಣಮುಖಗೊಂಡು ಮತ್ತೆ ಬೆಂಗಳೂರಿಗೆ ಹೆತ್ತವರು ಕರೆದುಕೊಂಡು ಹೋಗಿದ್ದಾರೆ.
ಓದಿ:ಶಾಲಾ ಬಾಲಕಿಗೆ ಸ್ಪ್ರೇ ಹಾಕಿದ ಪ್ರಕರಣಕ್ಕೆ ಹೊಸ ತಿರುವು: ಅಷ್ಟಕ್ಕೂ ಆಗಿದ್ದೇನು?
ಶಸ್ತ್ರಚಿಕಿತ್ಸೆ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಹ್ಯಾಂಡ್ ಸರ್ಜನ್ ಡಾ. ಭಾಸ್ಕರಾನಂದ ಅವರು, ಹ್ಯಾಂಡ್ ಸರ್ಜನ್ಗಳು ಇಂತಹ ಸರ್ಜರಿಯನ್ನು ಎರಡು ಅಥವಾ ಮೂರು ಮಾಡಲು ಮಾತ್ರ ಸರ್ಜನ್ಗಳ ವೃತ್ತಿ ಜೀವನದಲ್ಲಿ ಅವಕಾಶ ಸಿಗುತ್ತದೆ. ಆದರೆ ನಾನು ತಿರುಪತಿ ದೇವಸ್ಥಾನದ BIRDS ನ ವಿಸಿಟಿಂಗ್ ಪ್ರೊಪೆಸರ್ ಆಗಿದ್ದು, ಈವರೆಗೆ ಇಂತಹ 13 ಸರ್ಜರಿಗಳನ್ನು ಮಾಡಿದ್ದೇನೆ ಎಂದರು.
ಈ ಅನುಭವದ ಆಧಾರದಲ್ಲಿ ಐದಾರು ಗಂಟೆ ತಗುಲುವ ಶಸ್ತ್ರಚಿಕಿತ್ಸೆಯನ್ನು ಎರಡೂವರೆ ಗಂಟೆಯಲ್ಲಿ ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಮಗುವಿನ ಹೆಚ್ಚುವರಿ ಬೆರಳು ತೆಗೆದು ಅದರಿಂದ ಹೆಬ್ಬೆರಳು ಮಾಡಲಾಯಿತು. ಮಗು ಆರೋಗ್ಯದಿಂದ ಇದ್ದು ಡಿಸ್ಚಾರ್ಜ್ ಆಗಿದೆ ಎಂದು ತಿಳಿಸಿದ್ದಾರೆ.